ಚಿಕ್ಕಬಳ್ಳಾಪುರದಲ್ಲಿ ಶ್ರೀಗಳ ನೇತೃತ್ವದಲ್ಲಿ ಸತ್ಸಂಗ ಮತ್ತು ಸದ್ವಿಚಾರಗಳ ಶ್ರಾವಣ
ಚಿಕ್ಕಬಳ್ಳಾಪುರ: ಎಲ್ಲರೂ ಜಗತ್ತಿನ ಹಿಂದೆಬಿದ್ದು ಓಡುತ್ತಿದ್ದೇವೆ. ಆದರೆ, ಒಳಗಡೆ ಟೊಳ್ಳಾಗುತ್ತಿದ್ದೇವೆ. ಸತ್ಸಂಗಗಳು ಮನುಷ್ಯನಲ್ಲಿನ ಇಂಥ ಟೊಳ್ಳನ್ನು ನಿವಾರಿಸಿ ಅಲ್ಲಿ ಅಧ್ಯಾತ್ಮದ, ದೈವತ್ವ ಸೆಲೆ ನೆಲೆಗೊಳ್ಳುವಂತೆ ಮಾಡುತ್ತದೆ ಎಂದು ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರು ನುಡಿದರು.
ಚಿಕ್ಕಬಳ್ಳಾಪುರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಶನಿವಾರ ಸಂಜೆ ನಡೆದ ಸತ್ಸಂಗ-ಸದ್ವಿಚಾರಗಳ ಶ್ರಾವಣ ಕಾರ್ಯಕ್ರಮದಲ್ಲಿ ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳೂ; ಅಪ್ರಯತ್ನಪೂರ್ವಕವಾಗಿಯೇ ಅಜ್ಞಾನದ ಅಬ್ಬರ ಇದ್ದೇ ಇರುತ್ತದೆ. ಜತೆಗೆ, ನಾನು ಏನೂಂತ ತಿಳಿಯದೇ ಹೋದರೆ ಬದುಕು ಅಪೂರ್ಣವಾಗುತ್ತದೆ. ಹಾಗೆ ಆಗಬಾರದು. ಸದಾ ಸತ್ಸಂಗಗಳ ಮೂಲಕ ಸದ್ವಿಚಾರಗಳನ್ನು ಅರಿತು ಉತ್ತಮ ದಾರಿಯಲ್ಲಿ ಸಾಗಬೇಕು. ಇಲ್ಲದವರಿಗೆ ಕೊಂಚ ಕೊಡಬೇಕು. ಸ್ವಾರ್ಥವನ್ನು ಬಿಡಬೇಕು. ಸಮಾಜಕ್ಕಾಗಿ ಒಳ್ಳೆಯದನ್ನು ಮಾಡುವ ಮಾರ್ಗದಲ್ಲಿ ನಡೆಯಬೇಕು ಎಂದು ಉಪದೇಶಿಸಿದರು.
ಸ್ವಾಮೀಜಿ ಅವರು ಸತ್ಸಂಗದಲ್ಲಿ ನುಡಿದ ನುಡಿಮುತ್ತುಗಳು ಹೀಗಿವೆ;
- ಚಿಕ್ಕಬಳ್ಳಾಪುರಕ್ಕೆ ಬಂದರೆ ಧ್ಯಾನಸ್ಥಿತಿಗೆ ಬಹುಬೇಗ ಹೋಗಬಹುದು ಎಂದು ನಮ್ಮ ಪೂಜ್ಯ ಗುರುಗಳಾದ ಶ್ರೀ ಬಾಲಗಂಗಾಧರ ಮಹಾಸ್ವಾಮೀಜಿ ಅವರು ಹೇಳುತ್ತಿದ್ದರು. ಇಲ್ಲಿನ ವಾತಾವರಣದಲ್ಲಿ, ಸುತ್ತಮುತ್ತಲಿನ ಎಲ್ಲ ಜಾಗಳಲ್ಲೂ ಅಧ್ಯಾತ್ಮದ ತರಂಗಗಳು ಪಸರಿಸಿರುತ್ತವೆ. ಪಂಚಗಿರಿಗಳ ಪುಣ್ಯಭೂಮಿಯಾದ ಈ ನೆಲದಲ್ಲಿ ಅನೇಕ ಪೂಜ್ಯರು ಸಂಚರಿಸಿದ್ದಾರೆ. ಋಷಿ ಮುನಿಗಳು ತಪಸ್ಸು ಮಾಡಿ ಸಿದ್ದಿಯನ್ನು ಸಾಧಿಸಿದ್ದಾರೆ. ಇಂಥಹ ನೆಲದಲ್ಲಿ ನಾವುಗಳು ಎಂಟು ವರ್ಷ ಇದ್ದೆವು. ಈಗಲೂ ಇದ್ದೇವೆ.
- ಒಂದು ದೊಡ್ಡ ಅಯಸ್ಕಾಂತದ ಮುಂದೆ ಒಂದು ಕಬ್ಬಿಣದ ತುಂಡು ಇದ್ದರೆ, ಅದು ಅನಾಯಾಸವಾಗಿ ಮ್ಯಾಗ್ನೆಟ್ಗೆ ಆಕರ್ಷಿತವಾಗುತ್ತದೆ. ಒಂದು ವೇಳೆ ಆ ಕಬ್ಬಿಣದ ತುಂಡನ್ನು ಚಲಿಸದಂತೆ ಕಟ್ಟಿಹಾಕಿದರೆ? ಅದು ಆಕರ್ಷಿತವಾದರೂ ಅಯಸ್ಕಾಂತದ ಬಳಿ ಹೋಗಲು ಸಾಧ್ಯವಿಲ್ಲ. ಆದರೂ ಅದರ ಸುತ್ತ ಅಯಸ್ಕಾಂತೀಯ ಅಲೆಗಳು ಇದ್ದೇ ಇರುತ್ತವೆ. ಹಾಗೆಯೇ ನಮ್ಮ ಗುರುಗಳಿಗೆ ಗೋಚರವಾಗುತ್ತಿದ್ದ ನೇರ ಧ್ಯಾನಸ್ಥ ಸ್ಥಿತಿ ನಮಗೇಕೆ ಆಗುತ್ತಿಲ್ಲ? ಈ ನೆಲದಲ್ಲಿ ಈ ಹಿಂದೆ ಆಗಿಹೋದ ಅನೇಕ ಮಹಾಪುರುಷರು ಸೃಷ್ಟಿಸಿ ಹೋಗಿದ್ದ ಅಧ್ಯಾತ್ಮದ ಅಲೆಗಳ ಅನುಭವ ನಮಗೇಕೆ ಆಗುತ್ತಿಲ್ಲ? ನಮ್ಮ ಸುತ್ತ ಇರುವ ದೈವತ್ವದ ಅಲೆಯ ಅನುಭವ ನಮಗೇಕೆ ಆಗುತ್ತಿಲ್ಲ? ಏಕೆಂದರೆ, ನಮ್ಮ ಮನಸ್ಸಿನ ಮೇಲೆ ಅಥವಾ ನಮ್ಮ ಅಂತರಂಗದ ಮೇಲೆ ಅಜ್ಞಾನವೆಂಬ ಕತ್ತಲು ಕವಿದಿದೆ. ಹೀಗಾಗಿ, ಅಧ್ಯಾತ್ಮದ, ದೈವತ್ವದ ಅನುಭವವನ್ನು ಪುನರುಜ್ಜೀನವಗೊಳಿಸುವುದೇ ಈ ಸತ್ಸಂಗದ ಉದ್ದೇಶ. ನಂದಿ ಬೆಟ್ಟದಿಂದ ಪೂರ್ವಕ್ಕೆ ಹೋಗುತ್ತಿದ್ದಂತೆ ಈ ಅಧ್ಯಾತ್ಮದ ಅಯಸ್ಕಾಂತೀಯ ಅಲೆಯ ಪ್ರಭಾವ ಕಡಿಮೆಯಾಗುತ್ತಿದೆ.
- ನಮ್ಮಲ್ಲಿರುವ ಶಕ್ತಿ ಮತ್ತು ಆತ್ಮ ಬೇರೆ ಬೇರೆಯಲ್ಲ. ವಿಜ್ಞಾನದಲ್ಲಿ ಶಕ್ತಿ ಎಂದು ಕರೆದರೆ, ಅಧ್ಯಾತ್ಮದಲ್ಲಿ ಆತ್ಮ ಎನ್ನಲಾಗುತ್ತದೆ. ಆದರೆ ಇವೆರಡರ ಭಾವಾರ್ಥ ಒಂದೇ. ಏಕೆಂದರೆ; ಶಕ್ತಿ-ಅಧ್ಯಾತ್ಮವನ್ನು ನಾಶ ಮಾಡಲು ಆಗುವುದಿಲ್ಲ. ಹಾಗೆಯೇ ಅದನ್ನು ಸೃಷ್ಟಿ ಮಾಡುವುದು ಸಾಧ್ಯವೇ ಇಲ್ಲ. ಅದು ಹಾಗೆಯೇ ಇರುತ್ತದೆ. ಆದರೆ, ಕಾಲಕಾಲಕ್ಕೆ ರೂಪಾಂತರವಾಗುತ್ತಾ ಇರುತ್ತದೆ. ಅಂದರೆ; ನಮ್ಮ ಹುಟ್ಟಿಗೂ ಮುನ್ನ ಕಾಣದ ಒಂದು ರೂಪವಿದೆ, ಅದೇ ರೀತಿ ನಮ್ಮ ಸಾವಿನ ನಂತರವೂ ಅದಕ್ಕೊಂದು ರೂಪವಿರುತ್ತದೆ. ಹಾಗಿದ್ದರೂ ಒಂದು ಅಂಶ ಹಾಗೆಯೇ ಇರುತ್ತದೆ, ಅದನ್ನೇ ಶಕ್ತಿ ಅಥವಾ ಆತ್ಮ ಎಂದು ಕರೆಯುತ್ತೇವೆ. ನಮಗೆ ಕಾಣುವ ಬೆಳಕಿನ ನಡುವೆ ನಮ್ಮನ್ನು ಸದಾಚಾರಗಳತ್ತ ಮುನ್ನಡೆಸುವ ಸದ್ವಿಚಾರಗಳನ್ನು ಅರಿತು ನಮ್ಮೊಳಗೆ ಆ ಬೆಳಕನ್ನು ಸಾಧಿಸಿಕೊಳ್ಳುವ ಮೂಲಕ ಎಲ್ಲರೂ ಸನ್ಮಾರ್ಗದತ್ತ ನಡೆಯಬೇಕು. ನಾವು ಯಾರು? ಏತಕ್ಕಾಗಿ ಬಂದಿದ್ದೇವೆ? ಎಂಬುದನ್ನು ಅರಿತುಕೊಳ್ಳಬೇಕು. ಅಂತಹ ಜಿಜ್ಞಾಸೆಗಳಿಗೆ ಸತ್ಸಂಗದಲ್ಲಿ ಉತ್ತರ ದೊರಕುತ್ತದೆ.
- ಅಗಾಧ ಜೀವಕೋಶಗಳಿಂದ ತುಂಬಿಹೋಗಿರುವ ನಮ್ಮ ದೇಹವು ದಿನದಿನವೂ ಬದಲಾಗುತ್ತ, ರೂಪಾಂತರವಾಗುತ್ತಾ ಹೋಗುತ್ತದೆ. ಒಂದು ಜೀವಕೋಶದ ಅವಧಿ ನೂರಇಪ್ಪತ್ತು ದಿನ ಅಂತ ಹೇಳಲಾಗುತ್ತದೆ. ಹಾಗೆಯೇ ಮಿದುಳಿನಲ್ಲಿರುವ ನ್ಯೂರಾನ್ಗಳು ಒಮ್ಮೆ ಹುಟ್ಟಿ ಸತ್ತರೆ ಮತ್ತೆ ಬರುವುದಿಲ್ಲ. ಈ ದೇಹದಲ್ಲಿರುವ ಪ್ರತಿ ಜೀವಕೋಶಗಳು ಪ್ರತಿಕ್ಷಣವೂ ಸಾಯುತ್ತಿವೆ ಎಂದಾದರೆ, ದೇಹಕ್ಕೆ ಸಂಬಂಧಿಸಿದ ಸಾವು ಪ್ರತಿಕ್ಷಣದಲ್ಲೂ ಆಗುತ್ತಿದೆ ಎಂಬುದನ್ನು ನಾವೆಲ್ಲರೂ ಗ್ರಹಿಸಬೇಕು. ಇಂಥ ದೇಹವನ್ನು ಸ್ಥೂಲದೇಹ ಎಂದು ಕರೆಯಲಾಗುತ್ತದೆ. ಇನ್ನು; ನಮ್ಮೊಳಗಡೆ ಇನ್ನೊಂದು ದೇಹವಿದೆ. ಅದರ ಹೆಸರು ಸೂಕ್ಷ್ಮದೇಹ. ಅದನ್ನು ಮನಸ್ಸು, ಬುದ್ಧಿ, ಅಹಂಕಾರ, ಚಿತ್ತ ಇತ್ಯಾದಿಯಾಗಿ ಕರೆಯಬಹುದು. ಒಟ್ಟಾರೆಯಾಗಿ ಇದು ಅಂತಃಕರಣವನ್ನು ಒಳಗೊಂಡಿರುತ್ತದೆ. ಇದೆಲ್ಲಕ್ಕೂ ಕಾರಣೀಭೂತವಾದ ಇನ್ನೊಂದು ಕಾರಣ ದೇಹವಿದೆ. ಅದರ ಬಗ್ಗೆಯೂ ನಮಗೆ ಅರಿವು ಬೇಕು.
- ವಿಜ್ಞಾನ ಪ್ರವೇಶ ಮುಗಿದ ನಂತರದಲ್ಲಿ, ಆ ವಿಜ್ಞಾನದ ಪ್ರವೇಶ ಆಗದೇ ಇರುವ ಜಾಗವೇ ಅದ್ಯಾತ್ಮಿಕ ಜಗತ್ತು. ಇಲ್ಲಿ ಪಡೆದುಕೊಳ್ಳುವುದಕ್ಕೆ ಬರುವುದಕ್ಕಿಂತ ಕಳೆದುಕೊಳ್ಳುವುದಕ್ಕೇ ಬರಬೇಕು. ಅಂದರೆ; ನಮ್ಮಲ್ಲಿ ಅನಗತ್ಯವಾಗಿ ತುಂಬಿಕೊಂಡಿರುವಂಥದ್ದನ್ನು ಇಲ್ಲಿ ಕಳೆದುಕೊಳ್ಳುವಂತಾಗಬೇಕು. ಅದೇ ಸತ್ಸಂಗ. ಹೀಗಾಗಿ ಸತ್ಸಂಗದಲ್ಲಿ ಮನರಂಜನೀಯ ಅಂಶಗಳು ಇರುವುದಿಲ್ಲ. ಅದೇನಿದ್ದರೂ ನನ್ನನ್ನು ನಾನು ತಿಳಿದುಕೊಳ್ಳುವ ಪ್ರಕ್ರಿಯೆ. ನಮ್ಮಲ್ಲಿ ಅನಗತ್ಯವಾಗಿ, ಬೇಕಿಲ್ಲದೆ ತುಂಬಿಹೋಗಿರುವಂಥದ್ದನ್ನೆಲ್ಲ ಖಾಲಿ ಮಾಡಿಕೊಳ್ಳುವ ಪ್ರಕ್ರಿಯೆಯೂ ಹೌದು.
ಸತ್ಸಂಗದಲ್ಲಿ ಶ್ರೀಗಳ ಮತ್ತಷ್ಟು ನುಡಿಮುತ್ತುಗಳನ್ನು ಕೇಳಲು ಹಾಗೂ ಇಡೀ ಸತ್ಸಂಗದ ಸವಿ ಅನುಭವಿಸಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ..

https://www.facebook.com/Cknewsnow
ಸತ್ಸಂಗದಲ್ಲಿ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಮಂಗಳನಾಥ ಸ್ವಾಮೀಜಿ ಅವರು, ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್, ಮಾಜಿ ಶಾಸಕ ಬಿ.ಎನ್.ಬಚ್ಚೇಗೌಡ, ಕೆಪಿಎಸ್ಸಿ ಮಾಜಿ ಅಧ್ಯಕ್ಷ ಡಾ.ಎಚ್.ಎನ್.ಕೃಷ್ಣ ಮುಂತಾದವರು ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಸಚಿವರು ನಿರ್ಮಲಾನಂದನಾಥ ಶ್ರೀಗಳಿಗೆ ಪಾದಪೂಜೆ ನೆರೆವೇರಿಸಿದರು. ಸತ್ಸಂಗದ ವೇಳೆ ಶ್ರೀಗಳ ನೇತೃತ್ವದಲ್ಲಿ ಲಿಲಿತ ಸಹಸ್ರನಾಮ ಪಾರಾಯಣ, ಭಜನೆ ನಡೆಯಿತು. ತಾಲ್ಲೂಕಿನ ಸಾವಿರಾರು ಭಕ್ತರು, ಹಿತೈಷಿಗಳು ಭಾಗಿಯಾಗಿ ಶ್ರೀಗಳ ಅನುಗ್ರಹಕ್ಕೆ ಪಾತ್ರರಾದರು.



















