ಚಿಕ್ಕಬಳ್ಳಾಪುರ: ಕೊರೊನ ನಿರ್ವಹಣೆಯಲ್ಲಿ ರಾಜ್ಯ ಬಿಜೆಪಿ ಸರಕಾರವು 3,000 ಕೋಟಿ ರೂ.ಗಳಷ್ಟು ಭ್ರಷ್ಟಾಚಾರ ನಡೆಸಿದೆ. ಇದರ ಬಗ್ಗೆ ನ್ಯಾಯಾಂಗ ತನಿಖೆ ಆಗಬೇಕೆಂದು ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಒತ್ತಾಯ ಮಾಡಿದರು.
ಚಿಕ್ಕಬಳ್ಳಾಪುರದಲ್ಲಿ ಬುಧವಾರ ಕಾಂಗ್ರೆಸ್ ಪಕ್ಷದಿಂದ ಏರ್ಪಡಿಸಲಾಗಿದ್ದ ಬೃಹತ್ ʼಜನಧ್ವನಿ ಯಾತ್ರೆʼಯ ವೇಳೆ ಮಾತನಾಡಿದ ಅವರು; “ಇಡೀ ಪ್ರಪಂಚದಲ್ಲಿ ಕೊರೊನ ಎಂಬ ಮಹಾಮಾರಿ ಆವರಿಸಿಕೊಂಡಿತ್ತು. ಆದರೆ, ಯಾವುದೇ ದೇಶ ಇದರ ನೆಪ ಹೇಳಿ ಅಭಿವೃದ್ಧಿ ಕಾರ್ಯಗಳನ್ನು ನಿಲ್ಲಿಸಲಿಲ್ಲ. ರಾಜ್ಯದ ಬಿಜೆಪಿ ಸರಕಾರ ಮಾತ್ರ ಕೊರೊನ ಹೆಸರಲ್ಲಿ ಹಣ ಲೂಟಿ ಹೊಡೆದಿದೆ” ಎಂದು ಗಂಭೀರ ಆರೋಪ ಮಾಡಿದರು.
ಈ ವಿಷಯನ್ನು ಈಗಾಗಲೇ ವಿಧಾನಸಭೆಯಲ್ಲಿ ಅಂಕಿ-ಅಂಶಗಳ ಸಮೇತ ಪ್ರಸ್ತಾಪಿಸಿದ್ದೇನೆ. ಆದರೆ ಸರಕಾರ ನ್ಯಾಯಾಂಗ ತನಿಖೆಗೆ ಒಪ್ಪುತ್ತಿಲ್ಲ. ಇದಕ್ಕಾಗಿ ಅನೇಕ ವಿಷಯದಲ್ಲಿ ರಾಜ್ಯ ಸರಕಾರದ ಮೇಲೆ ಅನುಮಾನವಿದೆ ಎಂದರು ಸಿದ್ದರಾಮಯ್ಯ.
ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಯ ಬರಪೀಡಿತ ಪ್ರದೇಶಗಳೆಂದು ಮನಗಂಡು ಇಲ್ಲಿನ ರೈತ ಹಾಗೂ ಕುಡಿಯುವ ನೀರಿನ ಸೌಕರ್ಯಕ್ಕಾಗಿ ಎತ್ತಿನ ಹೊಳೆ, ಕೆ.ಸಿ.ವ್ಯಾಲಿ ಹೆಚ್.ಎನ್.ವ್ಯಾಲಿ ಯೋಜನೆಗಳಿಗೆ ಈಗ ಅಧಿಕಾರದಲ್ಲಿರುವ ಬಿಜೆಪಿ ವಿರೋಧದ ನಡುವೆಯೂ ನನ್ನ ಕಾಲಾವಧಿಯಲ್ಲಿ ಮಂಜೂರಾತಿ ನೀಡಿದ್ದೇನೆ. ಎತ್ತಿನಹೊಳೆ ಯೋಜನೆಗೆ 13,000 ಕೋಟಿ, ಹೆಚ್.ಎನ್.ವ್ಯಾಲಿಗೆ 1,200 ಕೋಟಿ ರೂ.ಗಳ ಮಂಜೂರಾತಿ ನೀಡಿದ್ದಕ್ಕಾಗಿ ಇಲ್ಲಿನ ಕಂದವಾರ ಕೆರೆ ತುಂಬಿರುವುದು ನನಗೆ ಹರ್ಷ ತಂದಿದೆ ಎಂದು ಅವರು ಹೇಳಿದರು.
ನನ್ನ ಅಧಿಕಾರದ ಅವಧಿಯಲ್ಲಿ ಯಾರೂ ಹಸಿವುನಿಂದ ಇರಬಾರದು ಎನ್ನುವ ಉದ್ದೇಶದಿಂದ ತಲಾ 7 ಕೆಜಿ ಅಕ್ಕಿ ನೀಡಲು ಪ್ರಾರಂಭಿಸಿದೆ. ದುರಂತ ಎಂದರೆ ಇಂದಿನ ಸರಕಾರ ಕೇವಲ ತಲಾ ಮೂರು ಕೆ.ಜಿ ಅಕ್ಕಿ ನೀಡುವ ಮೂಲಕ ಹಸಿದ ಹೊಟ್ಟೆಗೆ ಅನ್ನ ನೀಡದಾಗಿದೆ ಎಂದು ದೂರಿದರು.
ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದೇ ಬರುತ್ತದೆ. ಆಗ 10 ಕೆ.ಜಿ ಅಕ್ಕಿ ನೀಡಲಾಗುವುದೆಂದು ಇದೇ ವೇಳೆ ಸಿದ್ದರಾಮಯ್ಯ ಘೋಷಣೆ ಮಾಡಿದರು.