ನವದೆಹಲಿ: ಪ್ರಸಕ್ತ ಶೈಕ್ಷಣಿಕ ವರ್ಷ (2021-22) ದಿಂದ ಅಖಿಲ ಭಾರತ ಕೋಟಾದಡಿ (AIQ) ಪದವಿಪೂರ್ವ ಮತ್ತು ಸ್ನಾತಕೋತ್ತರ ವೈದ್ಯಕೀಯ/ದಂತ ವೈದ್ಯಕೀಯ (ಎಂ.ಬಿ.ಬಿ.ಎಸ್/ಎಂಡಿ/ಡಿಪ್ಲೊಮ/ಬಿಡಿಎಸ್/ಎಂ.ಡಿ.ಎಸ್) ಕೋರ್ಸ್ʼಗಳಿಗೆ ಒಬಿಸಿ 27% ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ 10% ಮೀಸಲಾತಿ ಕಲ್ಪಿಸುವ ಮಹತ್ವದ ನಿರ್ಧಾರವನ್ನು ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಕೈಗೊಂಡಿದೆ.
2021ರ ಜುಲೈ 26 (ಸೋಮವಾರ) ರಂದು ಪ್ರಧಾನಮಂತ್ರಿ ಮೋದಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ದೀರ್ಘಕಾಲದಿಂದ ಬಾಕಿ ಉಳಿದಿರುವ ವಿಷಯಗಳಿಗೆ ಪರಿಣಾಮಕಾರಿಯಾಗಿ ಪರಿಹಾರ ಒದಗಿಸುವಂತೆ ನಿರ್ದೇಶನ ನೀಡಲಾಗಿತ್ತು. ಅದರಂತೆ ಈ ನಿರ್ಧಾರ ಕೈಗೊಳ್ಳಲಾಗಿದೆ.
ಈ ನಿರ್ಧಾರದಿಂದ ಪ್ರತಿವರ್ಷ 1500 ಮಂದಿ ಒಬಿಸಿಗಳಿಗೆ ಎಂ.ಬಿ.ಬಿ.ಎಸ್ ಮತ್ತು 2,500 ಒಬಿಸಿ ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಹಾಗೂ 550 ಆರ್ಥಿಕವಾಗಿ ಹಿಂದುಳಿದ (EWS) ವಲಯದ ವಿದ್ಯಾರ್ಥಿಗಳಿಗೆ ಎಂ.ಬಿ.ಬಿ.ಎಸ್ ಮತ್ತು 1000 ಇ.ಡಬ್ಲ್ಯೂ.ಎಸ್ ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಕೋರ್ಸ್ ಗಳಿಗೆ ಪ್ರವೇಶ ಪಡೆಯಲು ಸಾಧ್ಯವಾಗಲಿದೆ.
ಅಖಿಲ ಭಾರತ ಕೋಟಾ (AIQ) ಕಾರ್ಯಕ್ರಮವನ್ನು 1986ರಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಪರಿಚಯಿಸಲಾಯಿತು. ಯಾವುದೇ ರಾಜ್ಯದ ವಿದ್ಯಾರ್ಥಿಗಳಿಗೆ ಬೇರೆ ರಾಜ್ಯದಲ್ಲಿರುವ ಉತ್ತಮ ವೈದ್ಯಕೀಯ ಕಾಲೇಜುಗಳಲ್ಲಿ ವ್ಯಾಸಂಗ ಮಾಡುವ ಆಕಾಂಕ್ಷಿಗಳಿಗೆ ಅರ್ಹತೆ ಆಧಾರದ ಮೇಲೆ ಪ್ರವೇಶದ ಅವಕಾಶಗಳನ್ನು ಇದು ಒದಗಿಸುತ್ತದೆ. ಅಖಿಲ ಭಾರತ ಕೋಟಾದಡಿ ಪದವಿ ಪೂರ್ವ–ಯುಜಿ ಅಡಿ ಶೇ.15ರಷ್ಟು ಸೀಟುಗಳಿವೆ ಮತ್ತು ಸ್ನಾತಕೋತ್ತರದ ವೈದ್ಯಕೀಯ ವಲಯದಲ್ಲಿ ಶೇ.50ರಷ್ಟು ಸೀಟುಗಳು ದೊರೆಲಿವೆ.
ಆರಂಭಿಕವಾಗಿ 2007ರವರೆಗೆ ಎಐಕ್ಯೂ ವಲಯದಲ್ಲಿ ಮೀಸಲಾತಿ ಇರಲಿಲ್ಲ. 2007ರಲ್ಲಿ ಎಐಕ್ಯೂ ಕಾರ್ಯಕ್ರಮದಡಿ 15% ಎಸ್.ಸಿಗಳು ಮತ್ತು 7.5% ಎಸ್.ಟಿ. ಮೀಸಲನ್ನು ಜಾರಿಗೊಳಿಸುವಂತೆ ಆದೇಶಿಸಿತು. ಕೇಂದ್ರೀಯ ಶಿಕ್ಷಣ ಸಂಸ್ಥೆಗಳಲ್ಲಿ ಒಬಿಸಿಗಳಿಗೆ 27% ಮೀಸಲಾತಿ ಜಾರಿಗೊಳಿಸುವ ಕೇಂದ್ರೀಯ ಶಿಕ್ಷಣ ಸಂಸ್ಥೆಗಳಲ್ಲಿ (ಪ್ರವೇಶದಲ್ಲಿ ಮೀಸಲಾತಿ) ಕಾಯ್ದೆ 2007ರಲ್ಲಿ ಜಾರಿಗೆ ಬಂತು. ಇದು ಸಪ್ದರ್ ಜಂಗ್ ಆಸ್ಪತ್ರೆಗಳು, ಲೇಡಿ ಹಾರ್ಡನಿಂಗ್ ವೈದ್ಯಕೀಯ ಕಾಲೇಜು, ಅಲಿಘರ್ ಮುಸ್ಲೀಂ ವಿಶ್ವವಿದ್ಯಾಲಯ ಮತ್ತು ಬನಾರಸ್ ಹಿಂದೂ ಯೂನಿವರ್ಸಿಟಿ ಮತ್ತಿತರೆ ಕಡೆಗಳಲ್ಲಿ ಜಾರಿಗೆ ತರಲಾಯಿತು. ಆದಾಗ್ಯೂ ಇದನ್ನು ರಾಜ್ಯ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜುಗಳಿಗೆ ವಿಸ್ತರಿಸಿಲ್ಲ.
ಹಾಲಿ ಸರಕಾರ ಹಿಂದುಳಿದ ವರ್ಗವಷ್ಟೇ ಅಲ್ಲದೇ ಆರ್ಥಿಕವಾಗಿ ಹಿಂದುಳಿದ ವಲಯಕ್ಕೆ ಮೀಸಲು ಕಲ್ಪಿಸಲು ಬದ್ಧವಾಗಿದೆ. ಇದೀಗ ಕೇಂದ್ರ ಸರಕಾರ ಎಐಕ್ಯೂ ಕೋಟಾದಡಿ ಈ ವಲಯಕ್ಕೆ 10% ಮೀಸಲಾತಿ ಮತ್ತು ಒಬಿಸಿ ವಲಯಕ್ಕೆ 27% ಮೀಸಲಾತಿ ಕಲ್ಪಿಸುವ ಐತಿಹಾಸಿಕ ತೀರ್ಮಾನ ಕೈಗೊಂಡಿದೆ. ಎಐಕ್ಯೂ ಕಾರ್ಯಕ್ರಮದಡಿ ಯಾವುದೇ ರಾಜ್ಯದ ಒಬಿಸಿ ವಿದ್ಯಾರ್ಥಿಗಳು ಸ್ಪರ್ಧಾತ್ಮಕವಾಗಿ ಸೀಟುಗಳನ್ನು ಪಡೆಯಬಹುದಾಗಿದೆ. ಕೇಂದ್ರೀಯ ಯೋಜನೆಯಡಿ ಕೇಂದ್ರೀಯ ಪಟ್ಟಿಯಲ್ಲಿರುವ ಒಬಿಸಿಗಳು ಈ ಮೀಸಲಾತಿ ಸೌಲಭ್ಯವನ್ನು ಪಡೆಯಬಹುದಾಗಿದೆ. ಸುಮಾರು 1,500 ಒಬಿಸಿಗಳು ಎಂ.ಬಿ.ಬಿ.ಎಸ್ ಮತ್ತು 2,500 ಸ್ನಾತಕೋತ್ತರ ಕೋರ್ಸ್ʼಗಳ ಸೀಟುಗಳ ಸೌಲಭ್ಯ ಪಡೆಯಬಹುದಾಗಿದೆ.
ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಸಂಸ್ಥೆಗಳಲ್ಲೂ ಪ್ರವೇಶ ಪಡೆಯಬಹುದು. ಇದಕ್ಕಾಗಿ 2019ರಲ್ಲಿ ಸಾಂವಿಧಾನಿಕ ತಿದ್ದುಪಡಿ ಮಾಡಲಾಗಿದ್ದು, ಈ ವಲಯದಲ್ಲಿ 10% ಮೀಸಲಾತಿ ಸೌಲಭ್ಯ ದೊರೆಯುತ್ತಿದೆ. ಇದಕ್ಕೆ ಅನುಗುಣವಾಗಿ ವೈದ್ಯಕೀಯ/ದಂತ ವೈದ್ಯ ವಲಯದಲ್ಲಿ 2019-20 ಮತ್ತು 2020–21ರಲ್ಲಿ ಎರಡು ವರ್ಷಗಳಲ್ಲಿ ಸೀಟುಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದ್ದು, ಆರ್ಥಿಕವಾಗಿ ಹಿಂದುಳಿದ ವಲಯದಲ್ಲಿ 10% ಸೀಟುಗಳ ಸಂಖ್ಯೆ ಹೆಚ್ಚಾಗಿದ್ದು, ಮೀಸಲಾತಿ ವ್ಯಾಪ್ತಿಗೆ ಒಳಪಡದ ಸೀಟುಗಳ ಸಂಖ್ಯೆಯಲ್ಲಿ ಕಡಿಮೆಯಾಗಿಲ್ಲ. ಆದಾಗ್ಯೂ ಎಐಕ್ಯೂ ಸೀಟುಗಳ ಸೌಲಭ್ಯವನ್ನು ಈವರೆಗೆ ವಿಸ್ತರಿಸಲಿಲ್ಲ. ಆದ್ದರಿಂದ 2021–22ರ ಸಾಲಿನಿಂದ ಪದವಿಪೂರ್ವ/ಸ್ನಾತಕೋತ್ತರ ವೈದ್ಯಕೀಯ/ದಂತ ವೈದ್ಯಕೀಯ ಕೋರ್ಸ್ʼಗಳ ಎಐಕ್ಯೂ ವಲಯದಲ್ಲಿ ಒಬಿಸಿಗಳಿಗೆ ಶೇ.27ರಷ್ಟು, ಆರ್ಥಿಕವಾಗಿ ಹಿಂದುಳಿದವರಿಗೆ ಶೇ.10ರಷ್ಟು ಮೀಸಲಾತಿ ಸೌಲಭ್ಯ ದೊರೆಯುತ್ತಿದೆ. ಇದರಿಂದ ಪ್ರತಿವರ್ಷ 550 ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಎಂ.ಬಿ.ಬಿ.ಎಸ್ ಮತ್ತು ಪಿ.ಜಿ. ವೈದ್ಯಕೀಯ ಕೋರ್ಸ್ʼಗಳಲ್ಲಿ 1000 ವಿದ್ಯಾರ್ಥಿಗಳಿಗೆ ಲಾಭ ದೊರೆಯಲಿದೆ.
ದಿಟ್ಟಹೆಜ್ಜೆ: ಡಾ.ಸಿ.ಎನ್.ಅಶ್ವತ್ಥಣಾರಾಯಣ
ಈ ನಿರ್ಧಾರ 2014ರಿಂದ ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಕೈಗೊಂಡ ಮಹತ್ವದ ಸುಧಾರಣೆಗಳಲ್ಲಿ ಮಹತ್ವದ್ದಾಗಿದ್ದು, ಕಳೆದ ಆರು ವರ್ಷಗಳಲ್ಲಿ ಎಂ.ಬಿ.ಬಿ.ಎಸ್ ಸೀಟುಗಳ ಪ್ರಮಾಣ 56% ಹೆಚ್ಚಳವಾಗಿದೆ. 2014ರಲ್ಲಿ 54,348 ರಷ್ಟಿದ್ದ ಸೀಟುಗಳ ಸಂಖ್ಯೆ 2020ರ ವೇಳೆಗೆ 84,649ಕ್ಕೆ ಏರಿಕೆಯಾಗಿದೆ. ಪಿಜಿ ಸೀಟುಗಳ ಪ್ರಮಾಣದಲ್ಲಿ 80% ಏರಿಕೆ ಕಂಡಿದ್ದು, 2014ರಲ್ಲಿ 30,191 ರಿಂದ 2020ರ ವೇಳೆಗೆ 54,275ಕ್ಕೆ ಏರಿಕೆಯಾಗಿದೆ. ಇದೇ ಅವಧಿಯಲ್ಲಿ 179 ವೈದ್ಯ ಕಾಲೇಜುಗಳಿದ್ದವು ಮತ್ತು ಈಗ ದೇಶದಲ್ಲಿ 558 (289 ಸರಕಾರಿ, 269 ಖಾಸಗಿ) ವೈದ್ಯಕೀಯ ಕಾಲೇಜುಗಳಿವೆ.
“ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ಕೈಗೊಳ್ಳಲಾಗಿರುವ ಈ ನಿರ್ಧಾರ ದೇಶದ ಉನ್ನತ ಶಿಕ್ಷಣ ವ್ಯವಸ್ಥೆಯ ದಿಕ್ಕನ್ನೇ ಬದಲಿಸಲಿದೆ ಹಾಗೂ ಕ್ರಾಂತಿಕಾರಕ ಬದಲಾವಣೆಗಳನ್ನು ತಂದು ಎಲ್ಲ ಹಂತದ ಸಾಮಾಜಿಕ, ಆರ್ಥಿಕ ಬದಲಾವಣೆಗಳಿಗೆ ಕಾರಣವಾಗುತ್ತದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.
ಒಬಿಸಿ ಕೋಟಾದಲ್ಲಿ 27% ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ 10% ಮೀಸಲು ಕಲ್ಪಿಸುವುದು ಸುಲಭದ ಮಾತಲ್ಲ. ಅದಕ್ಕೆ ಪ್ರಬಲ ರಾಜಕೀಯ ಇಚ್ಛಾಶಕ್ತಿ ಬೇಕು. ಮೋದಿ ಅವರಲ್ಲಿ ಅಂತಹ ಬಲವಾದ ಇಚ್ಛಾಶಕ್ತಿ ಇರುವ ಕಾರಣಕ್ಕೆ ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿಯುವ ಇಂಥ ಅತ್ಯುತ್ತಮ ನಿರ್ಧಾರ ಆಗಿದೆ ಎಂದು ಮಾಜಿ ಉಪ ಮುಖ್ಯಮಂತ್ರಿಗಳು ತಿಳಿಸಿದ್ದಾರೆ.
ಕೇಂದ್ರ ಸರಕಾರದ ಊ ನಿರ್ಧಾರದಿಂದ ಪ್ರತಿವರ್ಷವೂ 1,500 ಒಬಿಸಿ ಅಭ್ಯರ್ಥಿಗಳಿಗೆ ಎಂಬಿಬಿಎಸ್ನಲ್ಲಿ, 2,500 ಒಬಿಸಿ ವಿದ್ಯಾರ್ಥಿಗಳಿಗೆ ಸ್ನಾತಕೋತ್ತರದಲ್ಲಿ ಹಾಗೂ 550 ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಎಂಬಿಬಿಎಸ್, 1000 ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಕೋರ್ಸ್ʼಗಳಿಗೆ ಪ್ರವೇಶ ಪಡೆಯಲು ಸಾಧ್ಯವಾಗುತ್ತದೆ ಎಂದು ಮಾಜಿ ಡಾ.ಅಶ್ವತ್ಥನಾರಾಯಣ ಹೆಳಿದ್ದಾರೆ.