ರಕ್ಷಣೆಗೆ ಬಂದ ಭಾರತದ ಧ್ವಜ, ವಂದೇ ಮಾತರಂ; ಉಕ್ರೇನ್ ಸೇನೆಯಿಂದ ಎಸ್ಕಾರ್ಟ್; ಸದ್ಯಕ್ಕೆ ಹಳ್ಳಿಯೊಂದರಲ್ಲಿ ಆಶ್ರಯ; ಎರಡು ಮೂರು ದಿನಗಳಿಂದ ಊಟವಿಲ್ಲ
by GS Bharath Gudibande
ಗುಡಿಬಂಡೆ: ರಷ್ಯಾ ಮತ್ತು ಉಕ್ರೇನ್ ದೇಶಗಳ ನಡುವೆ ಸಮರ ನಡೆಯುತ್ತಿದ್ದು, ಕ್ಷಣ ಕ್ಷಣಕ್ಕೂ ಪರಿಸ್ಥಿತಿ ಕೈಮೀರುತ್ತಿದೆ. ಇನ್ನು ಅನೇಕ ಭಾರತೀಯರು ಯುದ್ಧಪೀಡಿತ ದೇಶದಲ್ಲೇ ಸಿಲುಕಿಕೊಂಡಿದ್ದು, ಅವರಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ವಿದ್ಯಾರ್ಥಿಗಳೂ ಇದ್ದಾರೆ.

ಜಿಲ್ಲೆಯ 10ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉಕ್ರೇನ್ʼನಲ್ಲಿ ಸಿಲುಕಿಕೊಂಡಿರುವುದಾಗಿ ಮಾಹಿತಿ ಇದ್ದು, ಈ ಪೈಕಿ ಗುಡಿಬಂಡೆ ತಾಲೂಕಿನ ಲಕ್ಷ್ಮೀಸಾಗರ ಗ್ರಾಮದ ನವನೀತ್ ಕುಮಾರ್ ಮತ್ತು ಕಂಬಾಲಹಳ್ಳಿಯ ನಂದ ಪ್ರಸಾದ್ ಆ ದೇಶದಿಂದ ಸ್ವದೇಶಕ್ಕೆ ವಾಪಸ್ಸಾಗಲು ಒದ್ದಾಡುತ್ತಿದ್ದಾರೆ.
ಜತೆಗೆ ಚಿಕ್ಕಬಳ್ಳಾಪುರ ಜಿಲ್ಲೆಯ ವಿವಿಧ ತಾಲೂಕುಗಳ ವಿದ್ಯಾರ್ಥಿಗಳು ಯುದ್ಧಭೂಮಿಯಲ್ಲಿ ಸಿಲುಕಿದ್ದಾರೆ ಎಂದು ಅವರ ಪೋಷಕರು ಮಾಹಿತಿ ಹಂಚಿಕೊಂಡಿದ್ದಾರೆ.

ವೈದ್ಯ ಶಿಕ್ಷಣಕ್ಕೆಂದು ಉಕ್ರೇನ್ʼನ ವಿವಿಧ ಮೆಡಿಕಲ್ ಕಾಲೇಜುಗಳಿಗೆ ಸೇರಿಕೊಂಡಿದ್ದರು ಇವರು. ಈಗ ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ನಡೆಯುತ್ತಿದ್ದು, ಅದು ದಿನೇದಿನೆ ತೀವ್ರವಾಗುತ್ತಿದೆ. ಶಿಕ್ಷಣಕ್ಕಿಂತ ನಮಗೆ ನಮ್ಮ ಮಗನೇ ಮುಖ್ಯ. ಅವರವರ ದ್ವೇಷಗಳಿಗೆ ನಮ್ಮ ಮಕ್ಕಳನ್ನು ಹಿಂಸಿಸುವುದು ಸರಿಯಲ್ಲ ಎಂದು ಪೋಷಕರು ಅಳಲು ತೋಡಿಕೊಂಡಿದ್ದಾರೆ.
ಉಕ್ರೇನ್ ಮೇಲೆ ರಷ್ಯಾ ಶೆಲ್, ಬಾಂಬ್, ಕ್ಷಿಪಣಿ ದಾಳಿ ನಡೆಸುತ್ತಿರುವುದು ಹಾಗೂ ಶೆಲ್ ದಾಳಿಗೆ ಹಾವೇರಿ ವಿದ್ಯಾರ್ಥಿ ನವೀನ್ ಮೃತಪಟ್ಟಿರುವುದು ಪೋಷಕರಲ್ಲಿ ತೀವ್ರ ಆತಂಕ ಉಂಟು ಮಾಡಿದೆ. ಹೀಗಾಗಿ ತಮ್ಮ ಮಕ್ಕಳನ್ನು ರಕ್ಷಿಸಿ ಸುರಕ್ಷಿತವಾಗಿ ಭಾರತಕ್ಕೆ ವಾಪಸ್ ಕರೆತರುವಂತೆ ಅವರೆಲ್ಲರೂ ರಾಜ್ಯ ಮತ್ತು ಕೇಂದ್ರ ಸರಕಾರಗಳಿಗೆ ಮನವಿ ಮಾಡುತ್ತಿದ್ದಾರೆ.

ಧೈರ್ಯ ತುಂಬಿದ ತಹಶೀಲ್ದಾರ್
ಇದೇ ವೇಳೆ ಗುಡಿಬಂಡೆ ತಹಸೀಲ್ದಾರ್ ಸಿಬ್ಗತ್ ವುಲ್ಲಾ ಅವರು ಉಕ್ರೇನ್ʼನಲ್ಲಿ ಸಿಲುಕಿಕೊಂಡಿರುವ ಗುಡಿಬಂಡೆ ತಾಲೂಕಿನ ಇಬ್ಬರು ವಿದ್ಯಾರ್ಥಿಗಳ ಪೋಷಕರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ವಿದ್ಯಾರ್ಥಿಗಳ ಆರೋಗ್ಯ ಮುಂತಾದ ವಿಷಯಗಳ ಬಗ್ಗೆ ಅವರು ಚರ್ಚಿಸಿದ್ದಾರೆ.
ಯುದ್ಧಪೀಡಿತ ದೇಶದಿಂದ ನಿಮ್ಮ ಮಕ್ಕಳನ್ನು ಕರೆತರುವ ಎಲ್ಲ ಪ್ರಯತ್ನಗಳನ್ನು ರಾಜ್ಯ ಮತ್ತು ಕೇಂದ್ರ ಸರಕಾರಗಳು ಮಾಡುತ್ತಿದ್ದು, ನೀವು ನಿಶ್ಚಿಂತೆಯಿಂದ ಇರಿ ಎಂದು ಅವರು ಪೋಷಕರಿಗೆ ಧೈರ್ಯ ತುಂಬಿದ್ದಾರೆ. ಅಲ್ಲದೆ, ಅವರು ಇಬ್ಬರು ವಿದ್ಯಾರ್ಥಿಗಳನ್ನು ಮೊಬೈಲ್ ಮೂಲಕ ಸಂಪರ್ಕಿಸಿ ಧೈರ್ಯ ತುಂಬಿದ್ದಾರೆ. ಈ ಸಂದರ್ಭದಲ್ಲಿ ಅವರಿಬ್ಬರೂ ತಮಗಾಗುತ್ತಿರುವ ತೊಂದರೆಯನ್ನು ಎಳೆಎಳೆಯಾಗಿ ತೋಡಿಕೊಂಡಿದ್ದಾರೆ.

ಉಕ್ರೇನ್ʼನಲ್ಲಿರುವ ಕನ್ನಡಿಗರ ಪರಿಸ್ಥಿತಿ ಭಯಾನಕವಾಗಿದೆ. ಅವರೆಲ್ಲರೂ ಭಯದ ವಾತಾವರಣದಲ್ಲಿ ಉಸಿರು ಅಂಗೈಯ್ಯಲ್ಲಿಟ್ಟುಕೊಂಡು ಊಟ ನೀರಿಲ್ಲದೆ ಪರದಾಡುತ್ತಿದ್ದಾರೆ. ಗುಡಿಬಂಡೆ ತಾಲೂಕಿನ ನಂದ ಪ್ರಸಾದ್ ಎಂಬ ವೈದ್ಯ ವಿದ್ಯಾರ್ಥಿ ಹಾಗೂ ಅವರ ಜತೆಗಿರುವ ಭಾರತೀಯ ವಿದ್ಯಾರ್ಥಿಗಳು ಎರಡು ದಿನಗಳಿಂದ ಊಟವಿಲ್ಲದೆ ಪರದಾಡುತ್ತಿದ್ದಾರೆ. ಅವರನ್ನು ರಕ್ಷಿಸಲು ಭಾರತ ಸರಕಾರ ಮುಂದಾಗಬೇಕು ಎಂದು ನಂದ ಪ್ರಸಾದ್ ಪೋಷಕರು ಅಳಲು ತೋಡಿಕೊಂಡಿದ್ದಾರೆ.
ಅಲ್ಲಿನ ಪರಿಸ್ಥಿತಿ ಭಯಾನಕ
ಉಕ್ರೇನ್ ಪರಿಸ್ಥಿತಿ ಕೈಮೀರಿ ಹೋಗುತ್ತಿದೆ. ಅಲ್ಲಿ ಕ್ಷಣಕ್ಷಣಕ್ಕೂ ಜೀವಗಳು ಹೋಗುತ್ತಿವೆ. ಯುದ್ಧದ ವಾತಾವರಣ ನಿರ್ಮಾಣವಾಗುತ್ತಿದಂತೆ ಆಹಾರ ಸಾಮಗ್ರಿಗಳನ್ನು ಸಂಗ್ರಹ ಮಾಡಿಟ್ಟುಕೊಳ್ಳಲಾಗಿತ್ತು. ಅವೆಲ್ಲ ಮುಗಿದು ಹೋಗಿವೆ. ಈಗ ಊಟವಿಲ್ಲದೆ ಅವರೆಲ್ಲರೂ ಒದ್ದಾಡುತ್ತಿದ್ದಾರೆ. ಅಲ್ಲಿನ ಬಂಕರ್ʼಗಳಲ್ಲಿ ಪ್ರಾಣ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿರುವುದಾಗಿ ಅಲ್ಲಿನ ಭಾರತೀಯ ವಿದ್ಯಾರ್ಥಿಗಳು ಹೇಳುತ್ತಿದ್ದಾರೆ.
ಉಕ್ರೇನ್ ಸೇನೆಯಿಂದ ಎಸ್ಕಾರ್ಟ್
ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತ ಸ್ಥಳಗಳಿಗೆ ತೆರಳಲು ಉಕ್ರೇನ್ ಸೇನೆ ಎಸ್ಕಾರ್ಟ್ ಮಾಡಿದೆ ವಿದ್ಯಾರ್ಥಿಗಳಿಬ್ಬರು ತಿಳಿಸಿದ್ದಾರೆ. ಆದರೆ, ಎಲ್ಲೇ ಹೋದರೂ ಸುರಕ್ಷತೆ ಬಗ್ಗೆ ಖಾತರಿ ಇಲ್ಲ. ಹೀಗಾಗಿ ಭಾರತ ಸರಕಾರ ನಮ್ಮ ಆದಷ್ಟು ಬೇಗ ರಕ್ಷಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ. ಭಾರತೀಯ ವಿದ್ಯಾರ್ಥಿ ಭಾರತದ ತ್ರಿವರ್ಣ ಧ್ವಜ ಹಿಡಿದುಕೊಂದು, ಭಾರತ ಮಾತಾ ಕೀ ಜೈ, ವಂದೇ ಮಾತರಂ ಎಂದು ಘೋಷಣೆಗಳನ್ನು ಕೂಗುತ್ತಾ ನಡೆದಿದ್ದಾರೆ.
ಎರಡು ಮೂರು ದಿನಗಳಿಂದ ಊಟವಿಲ್ಲ
ನಂದಪ್ರಸಾದ್ ಪ್ರತಿಭಾವಂತ ಹುಡುಗ. ವೈದ್ಯನಾಗಬೇಕು, ಜನರ ಸೇವೆ ಮಾಡಬೇಕು ಎಂಬ ಆಸೆಯಿಂದ, ಉಕ್ರೇನ್ ನಲ್ಲಿ ಶಿಕ್ಷಣಕ್ಕಾಗಿ ಹೋಗಿದ್ದಾನೆ, ಆದರೆ ಇಂತಹ ಪರಿಸ್ಥಿತಿ ಎದುರಿಸುತ್ತಿರುವುದು ನನಗೆ ಆತಂಕ ಉಂಟು ಮಾಡಿದೆ. ನಂದಪ್ರಸಾದ್ ಅವರ ತಂದೆ, ತಾಯಿ ಮಗನ ಬಗ್ಗೆ ತೀವ್ರ ಆತಂಕಗೊಂಡಿದ್ದಾರೆ. ಅವರ ಆರೋಗ್ಯವೂ ಸರಿ ಇಲ್ಲ. ಈಗಿನ ಉಕ್ರೇನ್ ಪರಿಸ್ಥಿತಿ ನೋಡಿದರೆ ಭಯವಾಗುತ್ತಿದೆ.




- ನಂದಪ್ರಸಾದ್ ಅವರ ಭಾರತೀಯ ಸಹಪಾಠಿಗಳು.
ಉಕ್ರೇನ್ ನಲ್ಲಿ ನಂದ ಪ್ರಸಾದ್ ಸಿಲುಕಿಕೊಂಡು ನರಕಯಾತನೆ ಅನುಭವಿಸುತ್ತಿದ್ದಾನೆ. ಎರಡು ಮೂರು ದಿನಗಳಿಂದ ಊಟವಿಲ್ಲ, ಯಾರು ಅವರ ಸಹಾಯಕ್ಕೆ ಬರುತ್ತಿಲ್ಲ. 448ಕ್ಕೂ ಹೆಚ್ಚು ಭಾರತೀಯರು ಇದ್ದಾರೆ. ಪ್ರಸ್ತುತ ಪಿಶ್ಚಿಯಾನ್ ಎಂಬ ಉಕ್ರೇನ್ ನ ಗ್ರಾಮವೊಂದರಲ್ಲಿದ್ದಾರೆ. ಭಾರತೀಯರು ತಮ್ಮನ್ನು ರಕ್ಷಿಸಿಕೊಳ್ಳಲು ಅಲ್ಲಿನ ರೈಲ್ವೇ ನಿಲ್ದಾಣಕ್ಕೆ ಬಂದು 5-6 ತಾಸು ಪ್ರಯತ್ನ ಮಾಡಿದರೂ ಉಪಯೋಗವಾಗಿಲ್ಲ. ಉಕ್ರೇನ್ ದೇಶದ ಮಕ್ಕಳಿಗೆ, ಹಿರಿಯರಿಗೆ ಆದ್ಯತೆ ನೀಡಿದ ಕಾರಣ ನಮಗೆ ಉಕ್ರೇನ್ ಗಡಿ ಪ್ರದೇಶಕ್ಕೆ ತಲುಪಲು ಸಾಧ್ಯವಾಗಿಲ್ಲ. ನಂತರ ಭಾರತ ಸರಕಾರ ನಮಗೆ ಹೇಗಾದರೂ ಮಾಡಿ ಗಡಿ ಪ್ರದೇಶಕ್ಕೆ ಬಂದು ಬಿಡಿ ಎಂದು ಮಾಹಿತಿ ನೀಡಿದೆ. ಹಾಗಾಗಿ ಎಲ್ಲಾ ಭಾರತೀಯ ವಿದ್ಯಾರ್ಥಿಗಳು ರೈಲ್ವೆ ನಿಲ್ದಾಣದಿಂದ ನಡೆದುಕೊಂಡು ಹೊಗಲು ಪ್ರಯತ್ನ ಮಾಡಿದ್ದಾರೆ. ಹೋಗುವ ದಾರಿಯಲ್ಲಿ ಯುದ್ಧ ವಿಮಾನಗಳ ಹಾರಾಟ, ಧ್ವಂಸವಾಗಿರುವ ರಸ್ತೆಗಳು, ಭಯಾನಕ ವಾತಾವರಣದಲ್ಲಿದ್ದಾಗ ಉಕ್ರೇನ್ ಸೇನೆ ಇವರಿಗೆ ಎಸ್ಕಾರ್ಟ್ ಮಾಡಿ ಸುರಕ್ಷಿತ ಸ್ಥಳಕ್ಕೆ ತಲುಪಿಸಲು ಪ್ರಯತ್ನ ಮಾಡಿದೆ. ಪ್ರಸ್ತುತ ಉಕ್ರೇನ್ ದೇಶದ ಪಿಶ್ಚಿಯಾನ್ ಗ್ರಾಮದಲ್ಲಿ ತಂಗಿದ್ದಾರೆ ಎಂಬ ಮಾಹಿತಿಯನ್ನು ನಂದಪ್ರಸಾದ್ ಅವರ ಸಂಬಂಧಿ ಮೂರ್ತಿ ಅವರು ಸಿಕೆನ್ಯೂಸ್ ನೌ ಜತೆ ಹಂಚಿಕೊಂಡಿದ್ದಾರೆ.

















ಬರೀ ಪುಕ್ಕಟೆ ಪ್ರಚಾರ ಮಾಡಿ ವೋಟು ಗಿಟ್ಟ ಸಿಕೊಳ್ಳಲು ಆಪರೇಷನ್ ಗಂಗಾ ಹೆಸರಿನಲ್ಲಿ ಮಾಧ್ಯಮಗಳಲ್ಲಿ ಪ್ರಚರಿಸಿ ಭಾರತದ ಸಾಮಾನ್ಯರ ಜೀವಗಳ ವೇಲೆ ಆಟ ಆಡುತ್ತಿರುವ ಅಸಮರ್ಥ ಕೇಂದ್ರ ಸರ್ಕಾರಕ್ಕೆ ಮಕ್ಕಳ ಹಸಿವಿನ ಶಾಪ ತಟ್ಟಲಿದೆ.