• About
  • Advertise
  • Careers
  • Contact
Sunday, May 18, 2025
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home ET CINEMA

ನನ್ನ ಚಿಕ್ಕ ಮಗಳು, ಎನ್‌ಟಿಆರ್-ಎಎನ್‌ಆರ್‌ ಅವರು ನಟಿಸಿದ್ದ ಮಾಯಾ ಬಜಾರ್ ಸಿನಿಮಾ ಮತ್ತು ಅಚ್ಚಳಿಯದ ಅಪ್ಪಟ ನಟ ಇರ್ಫಾನ್ ಖಾನ್‌

P K Channakrishna by P K Channakrishna
January 7, 2021
in ET CINEMA
Reading Time: 2 mins read
0
ನನ್ನ ಚಿಕ್ಕ ಮಗಳು, ಎನ್‌ಟಿಆರ್-ಎಎನ್‌ಆರ್‌ ಅವರು ನಟಿಸಿದ್ದ ಮಾಯಾ ಬಜಾರ್ ಸಿನಿಮಾ ಮತ್ತು ಅಚ್ಚಳಿಯದ ಅಪ್ಪಟ ನಟ ಇರ್ಫಾನ್ ಖಾನ್‌
920
VIEWS
FacebookTwitterWhatsuplinkedinEmail

ಸ್ಮರಣೆ

ಮಾಯಾ ಬಜಾರ್ ಚಿತ್ರದ ಪಾತ್ರಗಳಂತೆ ಕಣ್ಣೋಟದಲ್ಲೇ ಅಗಾಧವಾಗಿ ಪ್ರೇಕ್ಷಕರನ್ನು ಹಿಡಿಟ್ಟುಬಿಡುವ ಶಕ್ತಿ ಅವರಿಗೆ ಸಿದ್ಧಿಸಿತ್ತು. ತಲೆಮಾರುಗಳ ಕಾಲ ಅಚ್ಚಳಿಯದ ಆತನ ಭಾವಪೂರ್ಣ ನಟನೆಗೆ ಕೊನೆಯಾಗಲಿ ಮೊದಲಾಗಲಿ ಇಲ್ಲ. ಅದೊಂದು ನಿರಂತರ ಝರಿ. ಇರ್ಫಾನ್ ನಟನೆ ಬಹುಭಾವನೆಗಳ ಅನಾವರಣಕ್ಕೊಂದು ಮಾದರಿ. ಸ್ಟಡಿ ಮಾಡಲು ಒಂದು ಆಕರ.

ನನ್ನ ಚಿಕ್ಕ ಮಗಳು ಬಿನ, ಈ ಕ್ವಾರಂಟೈನ್ ಸಮಯದಲ್ಲಿ ನೋಡಿದ, ಇವತ್ತಿನ ಲೆಕ್ಕವೂ (29 ಏಪ್ರಿಲ್‌ 2020) ಸೇರಿ ‘ಮಾಯಾ ಬಜಾರ್’ ಸಿನಿಮಾವನ್ನು ಹನ್ನೊಂದು ಸಲ ನೋಡಿದಂತಾಯಿತು. ನಾನು ಇದರ ಮೇಲೆ ಒಂದೆರಡು ಸಲ ಜಾಸ್ತಿಯೇ ನೋಡಿರಬಹುದು.

ಹಿಂದಿಯ ಪರ್ಫೆಕ್ಟ್ ನಟ ಇರ್ಫಾನ್ ಖಾನ್ ತೀರಿಹೋದ ಸುದ್ದಿಯ ಬೇಜಾರಿನಲ್ಲಿ ನಾನು ಯಾರಲ್ಲೂ ಹೆಚ್ಚು ಮಾತನಾಡದೆ ರೂಮಿನಲ್ಲಿಯೇ ಮುದುರಿಕೊಂಡಿದ್ದೆ. ಅವಳು, ದೊಡ್ಮಗಳು ಲಹರಿ ಹಾಗೂ ಹೆಂಡತಿ ಜತೆ ಕೂತು ಇದೇ ಇರ್ಫಾನ್ ನಟಿಸಿದ್ದ ಪೀಕು, ಲಂಚ್ ಬಾಕ್ಸ್ ಮತ್ತು ಕಾರವಾನ್ ಚಿತ್ರಗಳನ್ನು ನೋಡಿದ್ದೆ. ಈ ಪೈಕಿ ಪೀಕು ಮತ್ತು ಕಾರವಾನ್ ಗಳನ್ನು ಎರಡು ಸಲ ನೋಡಿದ್ದೆ. ಈ ಚಿತ್ರಗಳೆರಡರಲ್ಲಿ ಇರ್ಫಾನ್ ಪಾತ್ರಗಳು ಒಂದೆ ತೆರನಾಗಿದ್ದರೂ ತನ್ನ ಅಮೋಘ ನಟನೆಯಿಂದ ಅವೆರಡಕ್ಕೂ ವಿಭಿನ್ನವಾಗಿ ಪ್ರಾಣವಾಯು ತುಂಬಿದ್ದರು.

ಇಂಥ ಇರ್ಫಾನ್ ಸೀರಿಯಸ್ ಪ್ರೇಕ್ಷಕರಿಗೆ ಮಾತ್ರವಲ್ಲ ಮಕ್ಕಳಿಗೂ, ಹಿರಿಯರಿಗೂ ಸಿನಿಮಾವನ್ನು ಸಶಕ್ತವಾಗಿ ದಾಟಿಸಬಲ್ಲ ನಟ. ಅವರಲ್ಲಿ ತನ್ನದೊಂದು ಗುಡಿ ಕಟ್ಟಿಕೊಂಡು ತನ್ನ ಕಣ್ಣೋಟದಲ್ಲಿಯೇ ಅಗಾಧ ಆಳದ ಭಾವ ಪ್ರಪಂಚದತ್ತ ಅವರನ್ನುಕರೆದೊಯ್ಯಬಲ್ಲ ನಟಶಿಖರ ಅವರು.

ಹಾಗಾದರೆ ಇಂಥ ಇರ್ಫಾನ್ ಗೂ ತೆಲುಗಿನ ಮಾಯಾ ಬಜಾರ್ ಚಿತ್ರಕ್ಕೇನೂ ಸಂಬಂಧ ಅಂತೀರಾ? ಇರಲಿ. ಈಗ ಮಾಯಾ ಬಜಾರ್ ಬಗ್ಗೆ ಕೊಂಚ ಹೇಳುತ್ತೇನೆ. ಚಿಕ್ಕ ಮಗಳು ಈ ಸಿನಿಮಾವನ್ನು ನೋಡೋಣ್ವ ಡ್ಯಾಡ್ ಎಂದಾಗ ನನಗೆ ಮನಸ್ಸಾಗಲಿಲ್ಲ. ಕೊನೆಗೆ ನನ್ನ ಬೇಸರವನ್ನು ಅವಳ ಮೇಲೇಕೆ ಹೇರಲಿ ಅಂದುಕೊಂಡು ಪ್ಲೇ ಮಾಡು ಮಗಳೇ ಎಂದೆ. ಮಗುವೋ ದೊಡ್ಡ ಸಂಭ್ರಮವೇ ಧಕ್ಕಿದಂತೆ ಅಮೆಜಾನ್ ಫ್ರೈಮಿನಲ್ಲಿದ್ದ ಆ ಸಿನಿಮಾವನ್ನು ಹಾಕಿದಳು. ಆಗ್ಗೆ ಅವಳೇ ಹನ್ನೊಂದು ಸಲ ನೋಡಿದ್ದಳು. ನಾನು ಕೂಡ ಹಲವಾರು ಸಲ ವೀಕ್ಷಿಸಿದ್ದೆ. ಅಷ್ಟು ಸಲ ನೋಡಿದರೂ ಮತ್ಯಾಕೆ ನೋಡುವುದು ಎಂದು ಅನಿಸಿದ್ದೇ ಇಲ್ಲ. ಈ ಸಾಕು ಎನಿಸಿದ್ದೂ ಇಲ್ಲ. ಚಿತ್ರ ನೋಡುತ್ತಾ ಹೋದಂತೆಲ್ಲ ಮೊದಲ ಸಲ ನೋಡುತ್ತಿದ್ದೇನೆ ಎನಿಸುತ್ತಿತ್ತು. ಅದರಲ್ಲೂ ಲಕ್ಷ್ಮಣ ಕುಮಾರನ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ರೇಲಂಗಿ ಮ್ಯಾನರಿಜಂ ಹೊಟ್ಟೆ ಉಬ್ಬುವಷ್ಟು ನಗುವಂತೆ ಮಾಡುತ್ತದೆ. ಒಂದು ಪೌರಾಣಿಕ ಕಥೆಗೆ ಕಮರ್ಷಿಯಲ್ ಮತ್ತು ಕಾಮಿಡಿ ಅಂಶಗಳನ್ನು ಹದವಾಗಿ ಬೆರೆಸಿದ್ದ ಈ ಸಿನಿಮಾ ಹಾಗೆಯೇ ಆವರಿಸಿಕೊಳ್ಳುತ್ತದೆ.‌

  • ಮಾಯಾ ಬಜಾರ್

ಬ್ಲ್ಯಾಕ್ ಅಂಡ್ ವೈಟ್

1957ರಲ್ಲಿ ಬಿಡುಗಡೆಯಾಗಿ ಇಡೀ ದಕ್ಷಿಣ ಭಾರತ ಸಿನಿ ಪ್ರೇಕ್ಷಕರಲ್ಲಿ ಹೊಸ ಜೋಶ್ ಹುಟ್ಟುಹಾಕಿದ್ದ ಬ್ಲ್ಯಾಕ್ ಅಂಡ್ ವೈಟ್ ವರ್ಣದ ಚಿತ್ರವಿದು. ಕೃಷ್ಣನ ಪಾತ್ರದಲ್ಲಿ ಎನ್.ಟಿ. ರಾಮಾರಾವು, ಅಭಿಮನ್ಯು ಪಾತ್ರದಲ್ಲಿ ಅಕ್ಕಿನೇನಿ ನಾಗೇಶ್ವರ ರಾವು, ಶಶಿರೇಖ ಪಾತ್ರದಲ್ಲಿ ಆ ಕಾಲದ ಸ್ಟಾರ್ ನಟಿ, ಸಹಜ ನಟಿ ಸಾವಿತ್ರಿ ಹಾಗೂ ಘಟೋತ್ಕಚನಾಗಿ ಆಲ್‌ಟೈಮ್‌ ಅದ್ಭುತ ನಟ ಎಸ್.ವಿ. ರಂಗಾರಾವು ನಟಿಸಿದ್ದರು. ನಮ್ಮ ಬಾಗೇಪಲ್ಲಿಯಿಂದ ಆಂಧ್ರಕ್ಕೆ ಹೊರಟರೆ ಸಿಗುವ ಶ್ರೀ ಕದಿರಿ ನರಸಿಂಹಸ್ವಾಮಿ ಕ್ಷೇತ್ರದ ಕದಿರಿ ಪಟ್ಟಣದ ಕೆ.ವಿ.ರೆಡ್ಡಿ ಅವರು ಈ ಚಿತ್ರವನ್ನು ಡೈರೆಕ್ಟ್ ಮಾಡಿದ್ದರು.

ಇಂಥ ಮಾಯಾ ಬಜಾರ್ ನಮ್ಮ ತಾಯಿಗೂ ಬಲು ಇಷ್ಟವಾದ ಸಿನಿಮಾವಾಗಿತ್ತು. ಆಕೆಯ ಜೀವಿತಾವಧಿ ತೀರುವುದರೊಳಗೆ ಟೀವಿ ಬರಲಿಲ್ಲ. ನಾನು ಮೂರೋ ಅಥವಾ ನಾಲ್ಕರಲ್ಲಿ ಓದುತ್ತಿದ್ದಾಗಲೇ ಅವರು ಹೋಗಿಬಿಟ್ಟಿದ್ದರು. ಇನ್ನು ಸಿನಿಮಾ ಎಂದರೆ ಅಮ್ಮನಿಗೆ ಪಂಚಪ್ರಾಣ. ನಮ್ಮೂರು ಪಕ್ಕದ ಬೀಚಗಾನಹಳ್ಳಿಯಲ್ಲಿದ್ದ ಶ್ರೀ ವೆಂಕಟೇಶ್ವರ ಚಿತ್ರಮಂದಿರಕ್ಕೆ ನಮ್ಮ ತಂದೆ ಹಾಗೂ ಆಕೆಯ ತಮ್ಮಂದರಿಬ್ಬರ ಜತೆ ಲೆಕ್ಕವಿಲ್ಲದಷ್ಟು ಸಲ ಹೋಗಿ ಸಿವಿಮಾ ನೋಡುತ್ತಿದ್ದರು. ಆ ಟೆಂಟಿಗೆ ಹೊಸ ಸಿನಿಮಾ ಬಂದರೆ ನಮ್ಮೂರಿನಲ್ಲಿ ಒಂದು ಪೋಸ್ಟರ್ ಪ್ರತ್ಯಕ್ಷವಾಗಿಬಿಡುತ್ತಿತ್ತು. ರೋಡಿನ ಪಕ್ಕದ ಯಾರಾದರೂ ಮನೆಯ ಗೋಡೆಯ ಮೇಲೆ ಪೋಸ್ಚರು ಬಿದ್ದಿದ್ದೇ ತಡ ನಮ್ಮ ಮನೆಯಲ್ಲಿ ಟೆಂಟಿಗೆ ಎತ್ತಿನ ಗಾಡಿ ಸಿದ್ಧವಾಗಿಬಿಡುತ್ತಿತ್ತು. ನಮ್ಮ ಊರಿಗೆ ಎರಡೇ ಫರ್ಲಾಂಗು ದೂರದಲ್ಲಿದ್ದ ಅಜ್ಜಿ ಮನೆಯಿಂದ ದೊಡ್ಡ ಮಾವ, ಚಿಕ್ಕ ಮಾವ ಬಂದುಬಿಡುತ್ತಿದ್ದರು. ಹಾಗೆ ಆ ಟೆಂಟಿನಲ್ಲಿ ಅಮ್ಮ ಮಾಯಾ ಬಜಾರ್ ಚಿತ್ರವನ್ನು ನೋಡಿದ್ದರು. ಆವತ್ತು ಜತೆಯಲ್ಲಿ ಚಿಕ್ಕ ಮಾವ, ದೊಡ್ಡಮ್ಮ, ಅಪ್ಪ ಇದ್ದರು ಅಂತ ನನ್ನ ದೊಡ್ಡ ಮಾವ ಇವತ್ತಿಗೂ ನನಗೆ ಹೇಳುತ್ತಾರೆ. ಜತೆಗೆ ಇನ್ನೊಂದು ಬಾರಿ ಅಜ್ಜಿ ಜತೆ ಅಮ್ಮ ಈ ಸಿನಿಮಾ ನೋಡಿದ್ದರಂತೆ.

ಮೂರು ತಲೆಮಾರು

ನಾನು ಅಮ್ಮನ ಹೊಟ್ಟೆಗೆ ಬಿದ್ದ ಮೇಲೆಯೂ ನಮ್ಮ ಮನೆಯಲ್ಲಿ ಎತ್ತಿನ ಗಾಡಿಯ ಟೆಂಟ್ ಸವಾರಿ ನಿಲ್ಲಲೇ ಇಲ್ಲ ಅಂತ ಅಪ್ಪ ಹೇಳುತ್ತಲೇ ಇರುತ್ತಾರೆ. ನಾನು ಹುಟ್ಟುವ ವಾರಕ್ಕೆ ಮೊದಲು ಅಮ್ಮಅಪ್ಪನಲ್ಲಿ ಒಂದು ಆಸೆ ತೋಡಿಕೊಂಡಿದ್ದರು. ಆಗಲೂ ಅಮ್ಮ ಟೆಂಟ್ನಲ್ಲಿ ಪಿಚ್ಚರ್ ನೋಡಬೇಕು ಎಂದು ಹೇಳಿದ್ದರಂತೆ. ಅಮ್ಮನ ಮಾತಿಗೆ ಅಪ್ಪ ಇಲ್ಲವೆಂದು ಹೇಳುವಂತೆಯೇ ಇಲ್ಲ. ಕರೆದುಕೊಂಡು ಹೋಗಿ ಅದೇ ಎನ್ ಟಿ ಆರ್ ಅವರು ಕೃಷ್ಣನಾಗಿ ನಟಿಸಿದ್ದ ಶ್ರೀಕಷ್ಣ ಪಾಂಡವೀಯಂ ಸಿನಿಮಾವನ್ನು ತೋರಿಸಿದ್ದರು. ಆಮೇಲೆ ನಾನು ಹುಟ್ಟಿದ ಮೂರು ತಿಂಗಳಿಗೆ ಮತ್ತೆ ಬೀಚಗಾನಹಳ್ಳಿ ಟೆಂಟಿಗೆ ಅಮ್ಮನ ಸವಾರಿ ನಡೆದಿತ್ತು. ಆದರೆ ಆ ಸಮಯದಲ್ಲಿ ಅಜ್ಜಿ, ಅಮ್ಮನಿಗೆ ಬೈಯ್ದು ಹೀಗೆ ಬಾಣಂತನ ಬಿಟ್ಟು ಹೊರಗೆ ಹೋಗಬಾರದು ಎಂದು ಜೋರು ಮಾಡಿದ್ದರಂತೆ. ಆದರೆ ಅಪ್ಪನಿಗೆ ಅಮ್ಮನ ಆಸೆ ಈಡೇರಿಸದೇ ಇರಲಾಗುತ್ತಿರಲಿಲ್ಲ. ಕೊನೆಗೆ ಅಮ್ಮ ತೀರಿಕೊಂಡಾಗ ಗೋಪಮ್ಮಊರಾಚೆ ಚೆನ್ನಪ್ಪನ ಬಾವಿ ಹಳ್ಳವನ್ನು ದಾಟಿಕೊಂಡು ಬೀಚಗಾನಹಳ್ಳಿ ಟೆಂಟಿಗೆ ಬಾಣಂತನದಲ್ಲೇ ಸಿನೆಮಾ ನೋಡಲು ಹೋಗಿದ್ದರು. ಅದಕ್ಕೆ ಯಾವುದೋ ಗಾಳಿ ತಗುಲಿ ದೃಷ್ಟಿ ಜಾಸ್ತಿಯಾಗಿ ಸತ್ತು ಹೋದರು ಎಂದು ನಮ್ಮೂರಿನ ಅವರಿವರು ಮಾತಾಡಿದ್ದನ್ನು ನಾನೇ ಕೇಳಿಸಿಕೊಂಡಿದ್ದೇನೆ. ಹೀಗೆ ನನ್ನ ತಾಯಿ ಸಾವಿಗೆ ಒಂದು ಕಾರಣವನ್ನು ಕೊಟ್ಟಿದ್ದರು ಊರಿನ ಜನ. ಅದೆಷ್ಟೋ ವರ್ಷ ಕಳೆದ ಮೇಲೆ ನನ್ನ ತಂಗಿ ಹುಟ್ಟಿದ ನಂತರ ಮಾಡಿಸಿಕೊಡ ಗರ್ಭನಿವಾರಕ ಶಸ್ತ್ರಚಿಕಿತ್ಸೆ ಸಮಸ್ಯೆಯಾಗಿ ಬೆಂಗಳೂರಿನ ವಿಕ್ಟ್ರೋರಿಯಾ ಆಸ್ಪತ್ರೆಯಲ್ಲಿ ಅಮ್ಮ ಇಹಲೋಕ ಬಿಟ್ಟರು ಎಂದು ಅಪ್ಪ ಹೇಳಿದ್ದರು.

ಹೀಗೆ ನಮ್ಮ ಮನೆಯಲ್ಲಿದ್ದ ಸಿನಿಮಾ ಪ್ರೀತಿ ನನ್ನ ತಲೆಮಾರು ಬಂದರೂ ಮುಂದುವರಿದಿತ್ತು. ಅಮ್ಮ ಅನಕ್ಷರಸ್ಥೆಯಾಗಿದ್ದರು. ತೆಲುಗು ಬಿಟ್ಟರೆ ಜಗತ್ತಿನಲ್ಲಿ ಬೇರೆ ಭಾಷೆಗಳಿವೆ ಅಂತ ಗೊತ್ತಿರಲ್ಲ ಆ ತಾಯಿಗೆ. ಕನ್ನಡ ಅಂತ ಒಂದು ಭಾಷೆ ಇದೆ ಎಂದು ಅಮ್ಮನಿಗೆ ಗೊತ್ತಾಗಿದ್ದು ಪರಮ ತುಂಟನಾದ ನನ್ನನ್ನು ಸ್ಕೂಲಿಗೆ ಸಾಗಿ ಹಾಕಿದಾಗಲೇ.

ಅಮ್ಮ ತೀರಿಕೊಂಡ ಮೇಲೆ ನನಗೆ ಸಿನಿಮಾ ನೋಡುವುದಿರಲಿ, ಹೊಟ್ಟೆಗಿಟ್ಟು ಸಿಗುವುದೇ ದುರ್ಲಭವಾಗಿಬಿಟ್ಟಿತು. ಆಮೇಲೆ ನಾನು ತರಗತಿ 8ಕ್ಕೆ ಗುಡಿಬಂಡೆ ಶಾಲೆಗೆ ಸೇರಿದ ಮೇಲೆಯೇ ಮತ್ತೆ ಸಿನಿಮಾ ಸಿನಿಮಾ ಟೆಂಟಿನೊಳಕ್ಕೆ ಕಾಲಿಟ್ಟಿದ್ದು. ಗುಡಿಬಂಡೆಯ ವೆಂಕಟೇಶ್ವರ ಚಿತ್ರಮಂದಿರಕ್ಕೆ ಮಾಯಾ ಬಜಾರ್ ಸಿನಿಮಾ ಬಂದಿತ್ತು, ಹೋಗಿ ನೋಡಿದ್ದೆ.

ಹೀಗೆ ನಮ್ಮ ಮನೆಯಲ್ಲಿ ಮೂರು ತಲೆಮಾರು ಕಾಲ ಮಾಯಾ ಬಜಾರ್ ಸಿನಿಮಾ ಅವಿಚ್ಛಿನ್ನವಾಗಿದೆ. ಅಮ್ಮ, ಆ ನಂತರ ನಾನು, ಈಗ ಮಗಳು ಮಾಯಾ ಬಜಾರಿಗೆ ಮಾರು ಹೋಗಿದ್ದೇವೆ. ಕೃಷ್ಣ ವೇಷದ ಎನ್ಟಿಆರ್ ತೆರೆಯ ಮೇಲೆ ಬಂದರೆ ʼಐಯ್ʼ ಎಂದು ಕಣ್ ಬಿಡುವ ಅವಳು ಘಟೋತ್ಕಚನ ಮಾಯಾಜಾಲವನ್ನು ಕಂಡುಜೋರಾಗಿ ಚಪ್ಪಾಳೆ ಹೊಡೆಯುತ್ತಾಳೆ. ಅಕ್ಕಿನೇನಿ-ಸಾವಿತ್ರಿ (ಅಭಿಮನ್ಯು-ಶಶಿರೇಖ) ಪ್ರಣಯವನ್ನು ನೋಡುತ್ತಾ ನನ್ನನ್ನೂ ಅವಳಮ್ಮನನ್ನು ದಿಟ್ಟಿಸುತ್ತಾಳೆ. 2 ಗಂಟೆ 55 ನಿಮಿಷದ ಸುದೀರ್ಘ ಸಿನಿಮಾವನ್ನು ಎವೆ ಇಕ್ಕದೆ ಸಿಂಗಲ್ ಬ್ರೇಕ್ ಇಲ್ಲದೆ ನೋಡಿ ಮುಗಿಸಿದ್ದಾಳೆ. ಇವತ್ತು ಕೂಡ. ಒಂದು ಸಿನಿಮಾ ಹೀಗೆ ತಲೆಮಾರುಗಳನ್ನು ದಾಟಿಕೊಂಡು ಉಳಿಯುವುದು ಸಣ್ಣ ಮಾತೇನೂ ಅಲ್ಲ.

ಇರ್ಫಾನ್ ಕೂಡ ಹೀಗೆ. ಮಾಯಾ ಬಜಾರ್ ಚಿತ್ರದ ಪಾತ್ರಗಳಂತೆ ಕಣ್ಣೋಟದಲ್ಲೇ ಅಗಾಧವಾಗಿ ಪ್ರೇಕ್ಷಕರನ್ನು ಹಿಡಿಟ್ಟುಬಿಡುವ ಶಕ್ತಿ ಅವರಿಗೆ ಸಿದ್ಧಿಸಿತ್ತು. ತಲೆಮಾರುಗಳ ಕಾಲ ಅಚ್ಚಳಿಯದ ಆತನ ಭಾವಪೂರ್ಣ ನಟನೆಗೆ ಕೊನೆಯಾಗಲಿ ಮೊದಲಾಗಲಿ ಇಲ್ಲ. ಅದೊಂದು ನಿರಂತರ ಝರಿ. ಇರ್ಫಾನ್ ನಟನೆ ಬಹುಭಾವನೆಗಳ ಅನಾವರಣಕ್ಕೊಂದು ಮಾದರಿ. ಸ್ಟಡಿ ಮಾಡಲು ಒಂದು ಆಕರ. ಲಂಚ್ ಬಾಕ್ಸ್, ಪೀಕು, ಕಾರಾವಾನ್ ಸೇರಿ ನಾನು ಇರ್ಫಾನ್ ಚಿತ್ರಗಳೆಲ್ಲವೂ ನಾನಿರುವ ತನಕ, ನಂತರವೂ ಬದುಕಿರುತ್ತವೆ. ಹಾಗೆಯೇ ನನ್ನ ಮಕ್ಕಳು ಹಾಗೂ ಅವರ ಮಕ್ಕಳ ನಂತರವೂ… ಹಾಗೆಯೇ ಆಗಲಿ ಎಂದು ಹೇಳುತ್ತಾ, ಇರ್ಫಾನ್ ಗೆ ಅಕ್ಷರ ವಿದಾಯ ಕೋರುತ್ತಾ…

ಉಳಿದಂತೆ…
ಇರ್ಫಾನ್ ಹೋಗಿಬನ್ನಿ, ನಿಮ್ಮ ಕಂಗಳು, ಅವು ವ್ಯಕ್ತಪಡಿಸುವ ಭಾವನೆಗಳು, ಆ ಭಾವನೆಗಳ ಪ್ರಾಮಾಣಿಕತೆ ಮತ್ತು ನಿಮ್ಮ ಅಭಿನಯ… ಇವು ನಮ್ಮೊಂದಿಗೇ ಇರುತ್ತವೆ. ನಮ್ಮೊಂದಿಗೂ..

****

  • Lead photo courtesy: lunch box

Tags: ANRIrfan khanMayabazarNTR
P K Channakrishna

P K Channakrishna

www.cknewsnow.com ಪ್ರಧಾನ ಸಂಪಾದಕ ಮತ್ತು ಸಂಸ್ಥಾಪಕ. ಪ್ರಿಂಟ್‌ ಮೀಡಿಯಾದಲ್ಲಿ 3 ದಶಕದಷ್ಟು ಸುದೀರ್ಘ ಅನುಭವ. ರಾಜಕೀಯ, ಕೃಷಿ, ಸಿನಿಮಾ, ಸಂಗೀತ, ಫೊಟೋಗ್ರಫಿ, ಪ್ರವಾಸ, ಸೋಶಿಯಲ್‌ ಮೀಡಿಯಾದಲ್ಲಿ ಆಸಕ್ತಿ. ಓದು ಅಚ್ಚುಮೆಚ್ಚು.

Related Posts

ಪ್ರಕಾಶ್ ರೈ ಸಂಸ್ಥೆಗೆ ಸರಕಾರದ ಹಣ; ದಾರಿ ತಪ್ಪಿದ ಕಲಾವಿದ ಎಂದು ಕುಟುಕಿದ JDS

ಪ್ರಕಾಶ್ ರೈ ಸಂಸ್ಥೆಗೆ ಸರಕಾರದ ಹಣ; ದಾರಿ ತಪ್ಪಿದ ಕಲಾವಿದ ಎಂದು ಕುಟುಕಿದ JDS

by cknewsnow desk
April 16, 2024
0

ಕುಮಾರಸ್ವಾಮಿ ಅವರನ್ನು ದಾರಿ ತಪ್ಪಿದ ಮಗ ಎಂದ ನಟನಿಗೆ ತಿರುಗೇಟು ಕೊಟ್ಟ ದಳ

ಶಾರುಖ್ ಖಾನ್, ಅಕ್ಷಯ್ ಕುಮಾರ್, ಅಜಯ್ ದೇವಗನ್‌ಗೆ ನೋಟಿಸ್

ಶಾರುಖ್ ಖಾನ್, ಅಕ್ಷಯ್ ಕುಮಾರ್, ಅಜಯ್ ದೇವಗನ್‌ಗೆ ನೋಟಿಸ್

by cknewsnow desk
December 10, 2023
0

ಗುಟ್ಕಾ ಜಾಹೀರಾತು ತಂದಿಟ್ಟ ಸಂಕಷ್ಟ

ಧೂಳ್ ಎಬ್ಬಿಸುತ್ತಿದೆ ಸಲಾರ್ ಟ್ರೇಲರ್

ಧೂಳ್ ಎಬ್ಬಿಸುತ್ತಿದೆ ಸಲಾರ್ ಟ್ರೇಲರ್

by cknewsnow desk
December 5, 2023
0

ಜಾಲತಾಣ ಜಗತ್ತಿನಲ್ಲಿ ಪ್ರಭಾಸ್ ಅಭಿಮಾನಿಗಳ ಹಬ್ಬವೋ ಹಬ್ಬ

ಕಾಂತಾರ-2 FIRST LOOK

ಕಾಂತಾರ-2 FIRST LOOK

by cknewsnow desk
November 27, 2023
0

ಬೆಚ್ಚಿಬೀಳೀಸಿದ ರಿಷಬ್‌ ಶೆಟ್ಟಿ ಅವತಾರ

ಕಾಂತಾರ 2 ಫಸ್ಟ್ ಲುಕ್: ರಿಷಬ್ ಶೆಟ್ಟಿ ಭಯಂಕರ

ಕಾಂತಾರ 2 ಫಸ್ಟ್ ಲುಕ್: ರಿಷಬ್ ಶೆಟ್ಟಿ ಭಯಂಕರ

by P K Channakrishna
November 27, 2023
0

ಏಳು ಭಾಷೆಗಳಲ್ಲಿ ನಿರ್ಮಾಣ; ಕನ್ನಡ ಚಿತ್ರರಂಗದ ದಾಖಲೆ

ಪೈರಸಿ ಹಾವಳಿಯಿಂದ ವರ್ಷಕ್ಕೆ 20,000 ಕೋಟಿ ರೂ. ನಷ್ಟ

ಪೈರಸಿ ಹಾವಳಿಯಿಂದ ವರ್ಷಕ್ಕೆ 20,000 ಕೋಟಿ ರೂ. ನಷ್ಟ

by P K Channakrishna
November 5, 2023
0

ಸಿನಿಮಾ ಪೈರಸಿ ತಡೆಗೆ ಕೇಂದ್ರದಿಂದ ಕಠಿಣ ಕ್ರಮ: ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್

Next Post
ಯಾರೂ ಶಾಶ್ವತವಲ್ಲ, ಇಟಲಿಯ ಬೆನಿಟೋ ಮುಸೊಲಿನಿಯಂತೆ…

ಯಾರೂ ಶಾಶ್ವತವಲ್ಲ, ಇಟಲಿಯ ಬೆನಿಟೋ ಮುಸೊಲಿನಿಯಂತೆ...

Leave a Reply Cancel reply

Your email address will not be published. Required fields are marked *

Recommended

ಕೋಲಾರದ ಮಾವಿಗೆ ಬರಲಿದೆ ಒಳ್ಳೆಯ ಕಾಲ; ಶ್ರೀನಿವಾಸಪುರದ ರುಚಿಕರ ಮ್ಯಾಂಗೋಗೆ ಶಕ್ತಿ ತುಂಬಲಿದೆ ಇಸ್ರೇಲ್

ಕೋಲಾರದ ಮಾವಿಗೆ ಬರಲಿದೆ ಒಳ್ಳೆಯ ಕಾಲ; ಶ್ರೀನಿವಾಸಪುರದ ರುಚಿಕರ ಮ್ಯಾಂಗೋಗೆ ಶಕ್ತಿ ತುಂಬಲಿದೆ ಇಸ್ರೇಲ್

4 years ago
ನಾನೇ ಒರಿಜಿನಲ್ ಎಂದ ಸಿ.ಎಂ.ಇಬ್ರಾಹಿಂಗೆ ಜೆಡಿಎಸ್‌ ಗೇಟ್‌ಪಾಸ್ ‌

ನಾನೇ ಒರಿಜಿನಲ್ ಎಂದ ಸಿ.ಎಂ.ಇಬ್ರಾಹಿಂಗೆ ಜೆಡಿಎಸ್‌ ಗೇಟ್‌ಪಾಸ್ ‌

2 years ago

Popular News

  • ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    0 shares
    Share 0 Tweet 0
  • ಹಾಡಿದವು ಕಣ್ಣುಗಳು!!

    0 shares
    Share 0 Tweet 0
  • ಎಚ್ಚೆನ್ ಎಂಬುವವರಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು…

    0 shares
    Share 0 Tweet 0
  • ಚಿರಸ್ಮರಣೀಯ ಚಿರಂಜೀವಿ

    0 shares
    Share 0 Tweet 0
  • ಬಾಲುಗಾರು… ಅದ್ಭುತಃ!!

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025
ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

May 8, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2021 cknewsnow

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2021 cknewsnow

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ