• About
  • Advertise
  • Careers
  • Contact
Sunday, May 18, 2025
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home CKPLUS

ಅಗಸ್ಟ್ 15 ಮತ್ತು ನಮ್ಮ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪೋಲಂಪಲ್ಲಿ, ಕೊಡುಗೆ ಯಾರದೂ ಇಲ್ಲ!!

P K Channakrishna by P K Channakrishna
November 8, 2020
in CKPLUS, NATION, STATE
Reading Time: 1 min read
0
ಅಗಸ್ಟ್ 15 ಮತ್ತು ನಮ್ಮ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪೋಲಂಪಲ್ಲಿ,  ಕೊಡುಗೆ ಯಾರದೂ ಇಲ್ಲ!!
946
VIEWS
FacebookTwitterWhatsuplinkedinEmail

ನಮ್ಮದು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪೋಲಂಪಲ್ಲಿ. ಚಿಕ್ಕಬಳ್ಳಾಪುರ ಜಿಲ್ಲೆಯ (ನಾನು ಓದುವಾಗ ಅದು ಕೋಲಾರ ಜಿಲ್ಲೆಯಲ್ಲೇ ಇತ್ತು..) ಗುಡಿಬಂಡೆ ತಾಲ್ಲೂಕಿನ ಒಂದು ಪ್ರಮುಖ ಹಳ್ಳಿ. ಪ್ರಮುಖ ಹಳ್ಳಿ ಏಕೆಂದರೆ, ಸುತ್ತಮುತ್ತಲಿನ ಏಳೆಂಟು ಹಳ್ಳಿಗಳ ಪೈಕಿ ಮಿಡ್ಲ್ ಸ್ಕೂಲ್ ಎಂಬುದು ಇದ್ದದ್ದೂ ನಮ್ಮ ಊರಿನಲ್ಲೇ. ನಮ್ಮ ಶಾಲೆಯಲ್ಲಿ ಭರ್ಜರಿ ಪಾಠ ಆಗುತ್ತೆ ಎಂಬ ಕಾರಣಕ್ಕೆ ಜಂಗಾಲಹಳ್ಳಿ ಮತ್ತೂ ಆಚೆಗಿದ್ದ ಚಿಕ್ಕಬಳ್ಳಾಪುರ ತಾಲ್ಲೂಕಿಗೆ ಸೇರಿದ್ದ ಏನಿಲ್ಲವೆಂದರೂ ನಮ್ಮೂರಿಗೆ ಐದು ಮೈಲು ದೂರವಿದ್ದ ಹಿರೇನಾಗವೇಲಿಯಿಂದ ಮಧು, ನರೇಂದ್ರ, ಮತ್ತೆ ಅವನ ಅಣ್ಣ ಸೇರಿ ಇನ್ನಿಬ್ಬರು ನಮ್ಮ ಶಾಲೆಗೆ ನಡೆದೇ ಬರುತ್ತಿದ್ದರು. ಮುಖ್ಯವಾಗಿ ಬಸವರಾಜಯ್ಯ ಮಾಸ್ತರ ನಾಮಬಲ ಶಾಲೆಯಲ್ಲಿ ವಿದ್ಯಾರ್ಥಿಗಳ ಜಾತ್ರೆಗೆ ಕಾರಣವಾಗಿತ್ತು.

ಇಂಥ ನಮ್ಮ ಶಾಲೆಯಲ್ಲಿ, ನಾನು ಪ್ರೈಮರಿ ತರಗತಿ, ಅಂದರೆ- ಒಂದರಿಂದ ನಾಲ್ಕರವರೆಗೆ ಓದುವಾಗ ಮೊದಲ ಎರಡು ವರ್ಷ ಕೆ.ವಿ.ರಾಮರಾವ್ ಎಂಬ ಮೇಷ್ಟ್ರು ಪಾಠಕ್ಕೆ ಬರುತ್ತಿದ್ದರು. ಅವರು ನಮ್ಮದೇ ತಾಲ್ಲೂಕಿನ ’ದಪ್ಪರ್ತಿ’ ಗ್ರಾಮದವರು. ಬೆಳಗ್ಗೆ ಸ್ಕೂಲ್ ಬೆಲ್ ಹೊಡೆಯುವುದಕ್ಕೆ ಐದು ನಿಮಿಷ ಹೆಚ್ಚೂ-ಕಮ್ಮಿ ಸೈಕಲ್ ಮೇಲೆ ಬಂದು ಚಕ್ಕನೇ ಇಳಿಯುತ್ತಿದ್ದರು. ಪಂಚೆ-ಪೈಜಾಮ ಅವರ ಕಾಸ್ಟ್ಯೂಮ್. ಥೇಟ್ ಹಳ್ಳಿಮೇಷ್ಟ್ರಂತೆಯೇ ಇದ್ದರು ಅವರು. ಇನ್ನು ಇವರು ಕ್ಲಾಸಿನಲ್ಲಿ ಪಾಠ ಮಾಡಿದ್ದಕ್ಕಿಂತ ಕುಂಡಿ ಎತ್ತಿ ಊಸು ಬಿಟ್ಟಿದ್ದೇ ಹೆಚ್ಚು. ಆದರೆ, ಕನ್ನಡ ಪಾಠದಲ್ಲಿ ಭಾರೀ ಖಡಕ್ಕು. ನಮ್ಮದೋ ತೆಲುಗುಸೀಮೆ. ಎದೆ ಬಗೆದರೂ ’ಅ ಆ ಇ ಈ’ ಕನ್ನಡಕ್ಷರಗಳು ಕಾಣುತ್ತಿರಲಿಲ್ಲ. …. ಕೊಡಕಲ್ಲಾರ! (… ಮಕ್ಕಳಿರಾ!) ಅಂತ ಎಷ್ಟೇ ಉಗಿದರೂ ನನಗಾಗಲಿ, ನನ್ನ ಜತೆಗಿದ್ದ ಯಾವನಿಗೇ ಆಗಲಿ ಅಕ್ಷರಮಾಲೆ ಒಲಿಯಲೇ ಇಲ್ಲ. ಹೀಗಿರಬೇಕಾದರೆ, ಗುಡಿಬಂಡೆಯಿಂದ ಹೊಸ ಮೇಷ್ಟರೊಬ್ಬರು ನಮ್ಮ ಶಾಲೆಗೆ ಬಂದರು. ಅವರ ಹೆಸರು ಫಕ್ರುದ್ದೀನ್ ಅಂತ. ಬಹಳ ಒಳ್ಳೆಯ ಮೇಷ್ಟ್ರು ಮಾತ್ರವಲ್ಲ, ಆ ಕಾಲಕ್ಕೆ ನೀಟ್ ಡ್ರೆಸ್ ಮಾಡಿಕೊಂಡು, ಅಂಗಿ ಮೇಲೊಂದು ವೇಸ್ಟ್ ಕೋಟ್ ಹಾಕಿ ಲೂನಾ ಗಾಡಿಯ ಮೇಲೆ ಠೀಕು-ಠಾಕಾಗಿ ಬರುತ್ತಿದ್ದರು. ಅವರು ಧರಿಸುತ್ತಿದ್ದ ಅಗಲವಾದ ಕೂಲಿಂಗ್ ಗ್ಲಾಸ್ ನಮ್ಮೆಲ್ಲರಿಗೂ ದೊಡ್ಡ ಅಚ್ಚರಿ. ಪಂಚೆ-ಪೈಜಾಮಾ ಧರಿಸಿ ಸೈಕಲ್ ಮೇಲೆ ಬುರತ್ತಿದ್ದ ರಾಮರಾವ್ ಮೇಷ್ಟ್ರು ಮತ್ತೂ ಲೂನಾ ಮೇಲೆ ಸ್ಟೈಲಿಷ್ ಆಗಿ ಬರುತ್ತಿದ್ದ ಫಕ್ರುದ್ದೀನ್ ಸಾಹೇಬರು ದಕ್ಷಿಣ-ಉತ್ತರದಂತೆ ಕಾಣುತ್ತಿದ್ದರು. ಅದುವರೆಗೂ ಸೈಕಲ್ ಮೇಲೆ ಬಂದು ಇಳಿಯುತ್ತಿದ್ದ ರಾಮರಾಯರು ನಮಗೊಂದು ಕಾಮಿಡಿ ಫೀಸ್ ಆಗಿದ್ದರೆ, ಅವರ ನಂತರ ಬಂದ ಲೂನಾ ಮೇಷ್ಟ್ರು ಜೇಮ್ಸ್ ಬಾಂಡ್ ಥರಾ ಕಾಣುತ್ತಿದ್ದರು. ಆಗ ನನಗೆ ಜೇಮ್ಸ್ ಬಾಂಡ್ ಯಾರೆಂದೂ ಗೊತ್ತಿರಲಿಲ್ಲ. ಬಿಟ್ಟರೆ, ಇನ್ನು ನಮ್ಮ ಹೆಡ್’ಮಾಸ್ಟರ್ ಸುಬ್ಬರಾಯಪ್ಪ ಅವರು ಪಕ್ಕದ ಪಾವಜೇನಹಳ್ಳಿಯಿಂದ ಬರುತ್ತಿದ್ದರು. ಅವರು ಕೂಡ ಸೈಕಲ್ ಮೇಲೆಯೇ ಬರುತ್ತಿದ್ದರು. ಸದಾ ಗಂಭೀರವಾಗಿರುತ್ತಿದ್ದ ಅವರು ನಮಗೆ ನಾಲ್ಕರಿಂದ ಕನ್ನಡಕ್ಕೆ ಬಂದು ಏಳನೇ ಕ್ಲಾಸ್’ವರೆಗೂ ಪಾಠ ಮಾಡಿದ್ದರು. ಮೆದುಮಾತಿನ ಅವರ ಕನ್ನಡ ಪಾಠ ಇವತ್ತಿಗೂ ಸೊಗಸು ಎನಿಸುತ್ತದೆ.

ಇನ್ನು ನಮಗೆಲ್ಲರಿಗೂ ಇಷ್ಟದ ಗುರುವಾಗಿದ್ದವರು ಬಸವರಾಜಯ್ಯ. ನಮ್ಮ ಶಾಲೆಯಲ್ಲಿ ಅವರು ಅಲ್’ರೌಂಡರ್ . ಗಣಿತವಿರಲಿ, ಸಮಾಜವಿರಲಿ ಅಥವಾ ಇಂಗ್ಲೀಷ್ ಆಗಲಿ ನಿರರ್ಗಳವಾಗಿ ಪಾಠ ಹೇಳುತ್ತಿದ್ದರು. ನಾನಂತೂ ಅವರಿಗೆ ಮನೆ ಶಿಷ್ಯನೇ ಆಗಿಬಿಟ್ಟಿದ್ದೆ. ಹಾಗೆ ಅನ್ನುವುದಕ್ಕಿಂತ ಅವರ ಮಾನಸಪುತ್ರನಾಗಿದ್ದೆ.

ಹೀಗಿರಬೇಕಾದರೆ, ಶಾಲೆಯಲ್ಲಿ ಅಗಸ್ಟ್ 15, ಜನವರಿ 26 ಈ ಎರಡೂ ದಿನಗಳನ್ನು ಬಹಳ ಅದ್ಧೂರಿಯಾಗಿ, ಅರ್ಥಪೂರ್ಣವಾಗಿ ಆಚರಿಸಲಾಗುತ್ತಿತ್ತು. ಪ್ರತಿ ಶುಕ್ರವಾರ ಸರಸ್ವತಿ ಪೂಜೆ ತಪ್ಪುತ್ತಿರಲಿಲ್ಲ. ಇಂಥ ಶುಕ್ರವಾರ ಬಂದರೆ ಎಲ್ಲ ಮೇಷ್ಟ್ರುಗಳು ತಲಾ ಹತ್ತೋ ಇಪ್ಪತ್ತೋ ರೂಪಾಯಿ ಕೊಟ್ಟರೆ, ವಾರಕ್ಕೊಂದು ಕ್ಲಾಸಿನ ಮಕ್ಕಳು ನಾಲ್ಕಾಣೆ, ಎಂಟಾಣೆ ಹಾಕಿಕೊಂಡು ಪೂಜೆ ಮಾಡಿಸುವ ಪರಿಕ್ರಮವಿತ್ತು. ಅದೊಂದು ಸಂಭ್ರಮ. ತಾಯಿ ಸರಸ್ವತಿ ಫೋಟೋ ಇಟ್ಟು ಭಕ್ತಿ ಗೀತೆಗಳನ್ನು ಹಾಡುವುದು ನಮ್ಮೆಲ್ಲರ ಪರಿಪಾಠವಾಗಿತ್ತು. ನಾವೆಷ್ಟೇ ಕೆಟ್ಟದಾಗಿ ಹಾಡಿದರೂ ನಮ್ಮ ಮೇಷ್ಟ್ರುಗಳು ದಯೆಯಿಂದ ಕೇಳಿಸಿಕೊಂಡು ಕ್ಷಮಿಸುತ್ತಿದ್ದರು ಎಂಬುದು ಬೇರೆ ಮಾತು.

ಇನ್ನು ನಮ್ಮ ಸಂಭ್ರಮದ ಆಕಾಶಕ್ಕೆ ಏಣಿ ಹಾಕುತ್ತಿದ್ದ ಸಂದರ್ಭವೆಂದರೆ ಅಗಸ್ಟ್ 15, ಜನವರಿ 26. ಅಗಸ್ಟ್ 15 ಬರುತ್ತೆ ಎನ್ನುವಾಗಲೇ ವಾರಕ್ಕೆ ಮೊದಲು ನನ್ನನ್ನುಸೇರಿ ನಾಲ್ಕೈದು ಹುಡುಗರನ್ನು ಕರೆದು (7ನೇ ಕ್ಲಾಸಿನಲ್ಲಿ ಇದ್ದವರಿಗೆ ಮಾತ್ರ) ಎ4 ಸೈಜಿನ ಬಿಳಿ ಹಾಳೆಯಲ್ಲಿ ಚಂದಾ ವಸೂಲಿಯ ಮನವಿಯನ್ನು ಸ್ವತಃ ಅವರೇ ಬರೆದುಕೊಡುತ್ತಿದ್ದರು. ಅವರ ಕನ್ನಡ ಬರಹ ಹೇಗಿತ್ತು ಎಂದರೆ, ಅಕ್ಷರಗಳನ್ನು ಮುತ್ತುಗಳಂತೆ ಪೋಣಿಸುತ್ತಿದ್ದರು. ಆ ಬಿಳಿ ಹಾಳೆಯನ್ನು ಒಂದು ರಟ್ಟಿಗೆ ಸಿಕ್ಕಿಸಿಕೊಂಡು ಹೊರಟರೆ ನಮಗೆ ಮೊದಲು ಬೋಣಿ ಮಾಡುತ್ತಿದ್ದವರು ನಮ್ಮೂರಿನ ಹಿರೀಕರಾಗಿದ್ದ ಪಿ.ಎಲ್. ರಾಮಕೃಷ್ಣರಾಯರು. ಅವರು ಏನಿಲ್ಲವೆಂದರೂ ರೂಪಾಯಿ 50ರ ಮೇಲೆಯೇ ಬರೆಯುತ್ತಿದ್ದರು. ಅಲ್ಲಿ ಬೋಣಿ ಚೆನ್ನಾಗಿ ಬಿತ್ತು ಎಂದರೆ ಉಳಿದ ಕಡೆ ವಸೂಲಿ ಸುಲಭ ಎಂಬ ನಂಬಿಕೆ ನಮ್ಮದು. ಇದಾದ ಮೇಲೆ ನಮ್ಮ ಸವಾರಿ ಪಕ್ಕದ ಅಪ್ಪಿರೆಡ್ಡಿ ಹಳ್ಳಿಯ ಮುನಿರೆಡ್ಡಿಯವರು, ನಡುವನ ಹಳ್ಳಿಯ ಆದಿನಾರಾಯಣ ರೆಡ್ಡಿ ಅವರ ಮನೆಯತ್ತ. ಬೆಳಗ್ಗೆ 8 ಗಂಟೆಗೂ ಮುನ್ನ ಅವರ ಮನೆ ತಲುಪಿದರೆ ಕಾಸು ಪಕ್ಕಾ. ಮುನಿರೆಡ್ಡಿ ಅವರು ಒಮ್ಮೆ 100 ರೂಪಾಯಿ ಕೊಟ್ಟ ನೆನಪು, ಆದಿನಾರಾಯಣ ರೆಡ್ಡಿ ಅವರದ್ದೂ ದೊಡ್ಡ ಕೈ. ಮೊದಲೇ ಪಟ್ಟಿ ಮಾಡಿಕೊಂಡು ಹಣ ಕೊಡುವವರನ್ನು ತಪ್ಪದೇ ಹೋಗಿ ಕೇಳುತ್ತಿದ್ದೆವು. ಈ ಪೈಕಿ ಜಂಗಾಲ ಹಳ್ಳಿಯ ಗೋಪಿನಾಥ ರಾಯರೂ ಒಬ್ಬರು. ಇವರು ಇಂಗ್ಲೀಷಿನಲ್ಲಿ ಭಾರೀ ಪಂಡಿತರು. ಆಮೇಲೆ ನನಗೆ ನ್ಯಾಷನಲ್ ಕಾಲೇಜಿನಲ್ಲಿ ಎಲ್’ಆರ್’ಕೆ ಎಂಬ ಲೆಕ್ಚರರ್ ಜ್ಯೂಲಿಯಸ್ ಸೀಜರ್ ಪಾಠ ಮಾಡುತ್ತಿದ್ದರೆ, ನನಗೆ ಷೇಕ್ಸ್’ಪಿಯರನ ಜತೆ ಅದೇ ಗೋಪಿನಾಥ ರಾಯರು ನೆನಪಾಗುತ್ತಿದ್ದರು. ನಾನು ಸೆಕೆಂಡ್ ಪಿಯುಸಿ ಓದುವಾಗಲೇ ಅವರು ನನಗೆ ಗ್ರಾಮರ್ ಪಾಠ ಹೇಳುತ್ತ ಷೇಕ್ಸ್’ಪಿಯರನ ಬಗ್ಗೆ ಕಥೆಯಂತೆ ಹೇಳುತ್ತಿದ್ದರು. ನನ್ನ ಕರ್ಮಕ್ಕೆ ಅವರಲ್ಲಿ ನಾನು ಬಹಳ ದಿನ ಕಲಿಯಲಾಗಲಿಲ್ಲ. ಇನ್ನು ಅವರು, ಪ್ರತಿಸಲವೂ 25 ರೂಪಾಯಿ ಕೊಟ್ಟೇಕೊಡುತ್ತಿದ್ದರು. ಇನ್ನು ಕೆಲವರು ಕೊಡುವುದಾಗಿ ಹೇಳಿ ಬಿಳಿಹಾಳೆ ಮೇಲೆ ಹೆಸರು ಬರೆದು ಸಹಿ ಕೂಡ ಮಾಡಿರುತ್ತಿದ್ದರು. ಐದಾರು ಸಲ ಅವರ ಮನೆ ಬಾಗಿಲಿಗೆ ಹೋದರೂ ಕಾಸು ಮಾತ್ರ ಕಾಣುತ್ತಿರಲಿಲ್ಲ. ಆಗೆಲ್ಲ ನಮ್ಮದೇ ಶೈಲಿಯಲ್ಲಿ ಶಾಪ ಹಾಕುತ್ತಿದ್ದೆವು. ’ಬಳ್ಳಾಪುರದಲ್ಲಿ (ಅಂದರೆ, ಚಿಕ್ಕಬಳ್ಳಾಪುರ) ಆಯಪ್ಪನ ಜೇಬಿಗೆ ಕಂಡೋರ ಕೈ ಬೀಳಾ’, ’ರಾತ್ರಿಗೆ ಅವರ ಮನೆಗೆ ಕಳ್ಳರು ಬೀಳಾ’, ’ನಡೆಯಬೇಕಾದ್ರೆ ಪಂಚೆ ಕಿತ್ತು ನಿಕ್ಕರ್ ಕಾಣಾ’, .. ಹೀಗೆ ಒಂದಲ್ಲ ಎರಡಲ್ಲ ಹತ್ತಿಪ್ಪತ್ತು ನಾಟಿ ಶೈಲಿಯ ಶಾಪ ಹಾಕಿ ಬರುತ್ತಿದ್ದೆವು. ಏನೇ ಆಗಲಿ, ಈ ವಸೂಲಿ ಕಾರ್ಯಕ್ರಮದಿಂದ ಸಂಗ್ರಹವಾಗುತ್ತಿದ್ದ ಮೊತ್ತದಿಂದ ಕಾರ್ಯಕ್ರಮದ ದಿನ ಭರ್ಜರಿ ಕೊಬರಿ ಮಿಠಾಯಿ, ವಿವಿಧ ಸ್ಪರ್ಧೆಗಳಲ್ಲಿ ಗೆಲ್ಲುವ ಮಕ್ಕಳಿಗೆ ಬಹುಮಾನ, ಧ್ವಜಸ್ತಂಭದ ಸುತ್ತ ಅಲಂಕಾರ ಇತ್ಯಾದಿಗೆ ಖರ್ಚಾಗುತ್ತಿತ್ತು. ಖರ್ಚಿಗೆ ಕಡಿಮೆ ಬಿದ್ದರೆ ಮೇಷ್ಟ್ರುಗಳ ಜೇಬಿಗೆ ಕತ್ತರಿ ಖಚಿತ. ಈ ಪೈಕಿ ಫಕ್ರುದ್ಧೀನ್ ಸರ್ ಬಹಳ ಧಾರಾಳಿ.
ಪ್ರತಿ ಶುಕ್ರವಾರದ ಸರಸ್ವತಿ ಪೂಜೆಗಂತೂ ನನಗೆ ನೆನಪಿದ್ದ ಮಟ್ಟಿಗೆ ಕೊರತೆ ಬಜೆಟ್ ಅನ್ನು ಅವರೇ ತುಂಬಿಸುತ್ತಿದ್ದರು. ಆಮೇಲೆ ಗುಡಿಬಂಡೆಯಿಂದ ನಮ್ಮ ಪಕ್ಕದ ಮೇಡಿಮಾಕಲ ಹಳ್ಳಿಯಲ್ಲಿ ಅವರು ಮನೆ ಮಾಡಿದ ಮೇಲೆ ಅವರು ನಮಗೆಲ್ಲ ಬಹಳ ಹತ್ತಿರದವರೇ ಆಗಿಬಿಟ್ಟರು.

ಇನ್ನು ಸ್ವಾತಂತ್ರ್ಯ ಸಂಭ್ರಮ ಅಂತೀರಾ? ನಮ್ಮ ಕೈಗೆ ಮಾಸ್ತರಿಂದ ಬಿಳಿಶೀಟ್ ಬಂದಾಗಿನಿಂದಲೇ ಸಡಗರ, ಸಂಭ್ರಮ ನಮ್ಮನ್ನು ಆವರಿಸಿಕೊಳ್ಳುತ್ತಿತ್ತು. ಹಿಂದಿನ ದಿನವೇ ನಮ್ಮೂರಿನ ನಾರಿಯರು ಮತ್ತು 7ನೇ ಕ್ಲಾಸಿನಲ್ಲಿ ಓದುತ್ತಿದ್ದ ನಮ್ಮ ಜೊತೆಯ ಹೆಣ್ಣುಮಕ್ಕಳು ಶಾಲೆಯ ಅಂಗಳವನ್ನು ತೊಳೆದು, ಸಾರಿಸಿ ಸ್ವಚ್ಛ ಮಾಡುತ್ತಿದ್ದರು. ಅವರು ಹಾಕುತ್ತಿದ್ದ ಬಣ್ಣಬಣ್ಣದ ರಂಗೋಲಿಯ ಸೊಬಗು ಇವತ್ತಿಗೂ ಹಸಿರು. ನಾನು, ನರೇಂದ್ರ, ಮೇಡಿಮಾಕಲ ಹಳ್ಳಿಯ ಮಂಜು, ಮುಕುಂದ, ಜಂಗಾಲಹಳ್ಳಿಯ ನಂದೀಶ, ಮೇಲಿನ ಅಪ್ಪಿರೆಡ್ಡಿ ಪಲ್ಲಿಯ ಗುರಪ್ಪ, ಗಿಡ್ಡಪ್ಪನಹಳ್ಳಿಯ ಪೂಜಪ್ಪ ಇತ್ಯಾದಿ ಎಲ್ಲರೂ ತಳಿರುತೋರಣ ಕಟ್ಟಿದರೆ, ಅದೇ ಮೇಡಿಮಾಕಲ ಹಳ್ಳಿಯ ಸಾವಿತ್ರಿ, ಅಪ್ಪಿರೆಡ್ಡಿಪಲ್ಲಿಯ ಪ್ರಸನ್ನಕುಮಾರಿ, ಜಂಗಾಲಹಳ್ಳಿಯ ಜಯಲಕ್ಷ್ಮೀ ಮುಂತಾದವರು ಅಂಗಳಕ್ಕೆ ಹೂವಿನ ಅಲಂಕಾರ ಮಾಡುತ್ತಿದ್ದರು. ಆವತ್ತಿಗೆ ಅದೆಷ್ಟು ಚೆಂದ ಇತ್ತೆಂದರೆ, ಯುಗಾದಿ, ದೀಪಾವಳಿಗಿಂತ ಅಗಸ್ಟ್ 15, ಜನವರಿ 26ಗಳೇ ನಮಗೆ ಸಂಭ್ರಮದ ಕಣಜಗಳಾಗಿದ್ದವು.

ಕೊನೆಗೆ, ಆವತ್ತಿನ ಬೆಳಗ್ಗೆ ಸೂರ್ಯ ಹುಟ್ಟುವ ಕ್ಷಣದಿಂದ ಸಂಜೆ ಧ್ವಜಸ್ತಂಭದಿಂದ ಬಾವುಟವನ್ನು ಕೆಳಗಿಳಿಸುವ ತನಕ ನಮ್ಮ ಸಡಗರಕ್ಕೆ ಕೊಂಚ ಧಣಿವಾಗುತ್ತಿರಲಿಲ್ಲ. ಬೆಳಗ್ಗೆ ಶಾಲೆಯಿಂದ ಹೊರಟ ಮೆರವಣಿಗೆ ಊರೆಲ್ಲ ಸಾಗುವುದು, ಘೋಷಣೆ-ಜಯಕಾರಗಳನ್ನು ಕೂಗುವುದು ಇತ್ಯಾದಿಗಳು, ಅದಾದ ಮೇಲೆ ಶಾಲೆಯ ಬಳಿ ಗಣ್ಯರ ಭಾಷಣ, ಹಾಡು-ಪಾಡು, ಬಹುಮಾನಗಳ ವಿತರಣೆ, ಬಹುಮಾನವಾಗಿ ಬರುತ್ತಿದ್ದ ಪೆನ್ನೋ, ನೋಟ್ ಪುಸ್ತಕವೋ ಅಥವಾ ಜಾಮೀಟರಿ ಪೆಟ್ಟಿಗೆಯೋ.. ಅದು ಸಿಕ್ಕಕೂಡಲೇ ಬಿಗಿಯಾಗಿ ಎದೆಗವಚಿಕೊಳ್ಳುವುದು, ಭಾಷಣ ಮುಗಿಯುತ್ತಿದ್ದಂತೆ ಪುಟ್ಟಪ್ಪ ಸ್ವಾಮಿಗಳೋ ಅಥವಾ ಲಕ್ಷ್ಮಣರಾಯರ ಪುತ್ರ ನರಸಿಂಹ ಮೂರ್ತಿ ಸ್ವಾಮಿಗಳು ತರುತ್ತಿದ್ದ ಕೊಬರಿ ಮಿಠಾಯಿಯ ಸವಿರುಚಿಗೆ ಬಾಯಲ್ಲಿ ನೀರು ತುಂಬಿಸಿಕೊಳ್ಳುವುದೂ.. ಇದ್ದೇ ಇತ್ತು.

***

ಈ ಸಂದರ್ಭದಲ್ಲಿ ನಮ್ಮ ಹಳ್ಳಿಯ ಕೆಲವರು ಶಾಶ್ವತ ಪಟಗಳಾಗಿ ನನ್ನಲ್ಲಿ ತುಂಬಿಹೋಗಿದ್ದಾರೆ. ಇವರಲ್ಲಿ ಪ್ರಮುಖರು ಪುಟ್ಟಪ್ಪ ಸ್ವಾಮಿಗಳು, ಅವರ ಪಾಲಿಗೆ ನಾನು ಪ್ರೀತಿಯ ಫಟಿಂಗ!! ಹೀಗೆಂದು ನನ್ನ ಕಿವಿಯನ್ನು ಹಿಂಡುತ್ತಿದ್ದ ಅವರು ಅಗಸ್ವ್ 15ರಂದು ನಮ್ಮ ಶಾಲೆಯಲ್ಲಿ ತಪ್ಪದೇ ಇರುತ್ತಿದ್ದರು. ಇನ್ನು, ಪಿ.ಎಲ್. ರಾಮಕೃಷ್ಣರಾವ್. ಅವರೂ ಇವೆಲ್ಲ ಸಂಭ್ರಮಗಳ ಅವಿಭಾಜ್ಯ ಅಂಗವಾಗಿರುತ್ತಿದ್ದರು. ಉಳಿದಂತೆ, ಸುಬ್ಬರೆಡ್ಡಿ, ಪಿ.ವಿ. ನಾರಾಯಣಪ್ಪ ಮುಂತಾದವರೆಲ್ಲ ನಮ್ಮ ಶಾಲೆಯ ಸಡಗರಕ್ಕೆ, ನಮ್ಮ ಆನಂದಕ್ಕೆ ಆಸರೆಯಾಗಿದ್ದವರು.

ಇದೆಲ್ಲವೂ ನನ್ನ ಬಾಲ್ಯದ ಬಹುದೊಡ್ಡ ನೆನಪಿನ ಗಂಟು. ಬಿಚ್ಚಿದಂತೆಲ್ಲ ಮುಗಿಯದ ನೆನಪು, ಕಾಪಿಟ್ಟುಕೊಂಡಿದ್ದೇನೆ..

ಸಹನೆಯಿಂದ ಓದಿದ್ದಕ್ಕೆ ಧನ್ಯವಾದಗಳು. ಎಲ್ಲರಿಗೂ ಸ್ವಾತಂತ್ರ್ಯ ದಿನದ ಶುಭಾಶಯಗಳು…

ಜೈ ಹಿಂದ್..
*****

ಚಿತ್ರ ಮಾಹಿತಿ:
ಬೆಂಗಳೂರು ನಗರದ ಸಪ್ತಗಿರಿ ಎಂಜನೀಯರಿಂಗ್ ಕಾಲೇಜಿನಲ್ಲಿ ’ತ್ರಿವರ್ಣ ಉತ್ಸವ-2020’ ಸಂಭ್ರಮ. ಕಳೆದ ಮೂರು ದಿನಗಳಿಂದ ಕಾಲೇಜಿನ ವಿದ್ಯಾರ್ಥಿಗಳು, ಬೋಧಕ ವರ್ಗ ಮತ್ತು ಇತರೆ ಸಿಬ್ಬಂದಿ ಈ ತ್ರಿವರ್ಣ ಧ್ವಜವನ್ನು ಬಹು ಆಸಕ್ತಿ, ಶ್ರದ್ಧೆಯಿಂದ ಸಿದ್ಧಪಡಿಸಿದ್ದಾರೆ. 4,000 ಕೆಜಿ ಉಪ್ಪು, 400 ಕೆಜಿ ಹೂವು ಹಾಗೂ 250 ಕೆಜಿ ಬಣ್ಣಗಳನ್ನು ಇದಕ್ಕಾಗಿ ಬಳಸಲಾಗಿದೆ..
Photos: BNMK Photographs

Tags: August 15independence-dayindiakarnataka
P K Channakrishna

P K Channakrishna

www.cknewsnow.com ಪ್ರಧಾನ ಸಂಪಾದಕ ಮತ್ತು ಸಂಸ್ಥಾಪಕ. ಪ್ರಿಂಟ್‌ ಮೀಡಿಯಾದಲ್ಲಿ 3 ದಶಕದಷ್ಟು ಸುದೀರ್ಘ ಅನುಭವ. ರಾಜಕೀಯ, ಕೃಷಿ, ಸಿನಿಮಾ, ಸಂಗೀತ, ಫೊಟೋಗ್ರಫಿ, ಪ್ರವಾಸ, ಸೋಶಿಯಲ್‌ ಮೀಡಿಯಾದಲ್ಲಿ ಆಸಕ್ತಿ. ಓದು ಅಚ್ಚುಮೆಚ್ಚು.

Related Posts

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

ಚುನಾವಣಾ ವ್ಯವಸ್ಥೆಗೆ ಸುಪ್ರೀಂ ಚಿಕಿತ್ಸೆ

ಹನಿಟ್ರ್ಯಾಪ್‌: ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್

by cknewsnow desk
March 27, 2025
0

ಅರ್ಜಿದಾರರನ್ನೇ ಕ್ಲಾಸ್ ತೆಗೆದುಕೊಂಡ ಕೋರ್ಟ್

Next Post
ರಾತ್ರಿ ಪುನರ್ಜನ್ಮದ ಬಗ್ಗೆ ಅಂಗೇನು ಎಂದಿದ್ದ ಅಪ್ಪ, ಬೆಳಗ್ಗೆ ಹೊತ್ತಿಗೆ ಹೊರಟುಬಿಟ್ಟಿದ್ದರು!!

ರಾತ್ರಿ ಪುನರ್ಜನ್ಮದ ಬಗ್ಗೆ ಅಂಗೇನು ಎಂದಿದ್ದ ಅಪ್ಪ, ಬೆಳಗ್ಗೆ ಹೊತ್ತಿಗೆ ಹೊರಟುಬಿಟ್ಟಿದ್ದರು!!

Leave a Reply Cancel reply

Your email address will not be published. Required fields are marked *

Recommended

ಬಿಜೆಪಿಯಲ್ಲಿ ಏನೋ ಆಗುತ್ತಿದೆ!! ದಿಲ್ಲಿಯಲ್ಲಿ ಬೀಡುಬಿಟ್ಟ ರೆಬೆಲ್‌ ಲೀಡರ್‌ ಅರವಿಂದ ಬೆಲ್ಲದ್

ಬಿಜೆಪಿಯಲ್ಲಿ ಏನೋ ಆಗುತ್ತಿದೆ!! ದಿಲ್ಲಿಯಲ್ಲಿ ಬೀಡುಬಿಟ್ಟ ರೆಬೆಲ್‌ ಲೀಡರ್‌ ಅರವಿಂದ ಬೆಲ್ಲದ್

4 years ago
ಪ್ರಧಾನಿಯನ್ನು ಭೇಟಿಯಾಗೋಕೆ ಸಿದ್ದರಾಮಯ್ಯನ ಪರ್ಮಿಷನ್‌ ಬೇಕಾ? ನಾನ್‌ಸೆನ್ಸ್‌ ಎಂದ ದೇವೇಗೌಡರು

ನನ್ನ ಕಣ್ಣ ಮುಂದೆ ಜೆಡಿಎಸ್ ಅಧಿಕಾರಕ್ಕೆ ಬರುವುದು ಸತ್ಯ ಎಂದ ಹೆಚ್.ಡಿ.ದೇವೇಗೌಡರು

3 years ago

Popular News

  • ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    0 shares
    Share 0 Tweet 0
  • ಹಾಡಿದವು ಕಣ್ಣುಗಳು!!

    0 shares
    Share 0 Tweet 0
  • ಎಚ್ಚೆನ್ ಎಂಬುವವರಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು…

    0 shares
    Share 0 Tweet 0
  • ಚಿರಸ್ಮರಣೀಯ ಚಿರಂಜೀವಿ

    0 shares
    Share 0 Tweet 0
  • ಬಾಲುಗಾರು… ಅದ್ಭುತಃ!!

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025
ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

May 8, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2021 cknewsnow

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2021 cknewsnow

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ