ಬೆಂಗಳೂರು: ಫೆಬ್ರವರಿ 22ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಹಿರೇನಾಗವೇಲಿ ಕ್ರಷರ್ ಸ್ಫೋಟದಿಂದ ಆರು ಕಾರ್ಮಿಕರು ಧಾರುಣವಾಗಿ ಸಾವನ್ನಪ್ಪಿದ ಘಟನೆಗೆ ಹೊಸ ತಿರುವು ಸಿಕ್ಕಿದೆ.
ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್ಜಿಟಿ) ಮಾಧ್ಯಮ ವರದಿಗಳ ಆಧಾರದ ಮೇಲೆ ಪ್ರಕರಣವನ್ನು ಕೈಗೆತ್ತಿಕೊಂಡಿರುವುದು, ಆ ಬಗ್ಗೆ ವರದಿ ನೀಡಲು ಆರು ಜನರ ಉನ್ನತ ಸಮಿತಿ ರಚನೆ ಮಾಡಿರುವುದನ್ನು ಪರಿಸರ ಪ್ರೇಮಿಗಳು ಹಾಗೂ ಜಿಲ್ಲೆಯ ಜನರು ಸ್ವಾಗತಿಸಿದ್ದಾರೆ.
ಎನ್ಜಿಟಿ ಕ್ರಮ ನಮ್ಮ ಜಿಲ್ಲೆಗೆ ಮಹತ್ವದ್ದು
ಹಸಿರು ನ್ಯಾಯಮಂಡಳಿ ಅಧ್ಯಕ್ಷರಾದ ನ್ಯಾಯಮೂರ್ತಿ ಎ.ಕೆ.ಗೋಯಲ್ ಅವರು ಹಿರೇನಾಗವೇಲಿಯ ಭೀಕರ ಸ್ಫೋಟ ಹಾಗೂ ಆ ದುರಂತದಲ್ಲಿ ಸಾವನ್ನಪ್ಪಿದ ಆರು ಜನರ ಧಾರುಣತೆಯು, ಜತೆಗೆ; ಅಕ್ರಮವಾಗಿ ನಿಯಮಗಳನ್ನು ಮೀರಿ ಕಲ್ಲು ಕ್ವಾರಿಗಳಲ್ಲಿ ಆಳ ಸ್ಫೋಟಗಳನ್ನು ನಡೆಸುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ಬಂದ ವರದಿಗಳನ್ನು ಆಧರಿಸಿ ಸ್ವಯಂ ಪ್ರೇರಿತರಾಗಿ ಈ ಕ್ರಮಕ್ಕೆ ಮುಂದಾಗಿರುವುದು ನಮ್ಮ ಜಿಲ್ಲೆಯ ಮಟ್ಟಿಗೆ ಮಹತ್ವದ ಬೆಳವಣಿಗೆ. ಜತೆಗೆ, ಹಸಿರು ನ್ಯಾಯಮಂಡಳಿ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ, ರಾಜ್ಯದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಅವರಿಗೆ ನೊಟೀಸ್ ಜಾರಿ ಮಾಡಿರುವುದು ನಾನು ಮುಕ್ತಕಂಠದಿಂದ ಸ್ವಾಗತಿಸುತ್ತೇನೆ ಎಂದು ಜಿಲ್ಲೆಯ ಶಾಶ್ವತ ನೀರಾವರಿ ಹೋರಾಟಗಾರ ಹಾಗೂ ಕ್ರಷರ್ಗಳ ಪರವಾಗಿ ರಾಜ್ಯ ಸರಕಾರ ಕೋವಿಡ್ ಕಾಲದಲ್ಲಿ ತರಾತುರಿಯಲ್ಲಿ ಜಾರಿಗೆ ತಂದಿರುವ ನೂತನ ಕಾಯ್ದೆ ವಿರುದ್ಧ ಕಾನೂನು ಹೋರಾಟ ನಡೆಸುತ್ತಿರುವ ಆರ್.ಆಂಜನೇಯ ರೆಡ್ಡಿ ತಿಳಿಸಿದ್ದಾರೆ.

ಆರ್.ಆಂಜನೇಯ ರೆಡ್ಡಿ
ಇದರ ಜತೆಗೆ; “ನಾನು ಕೂಡ ಈ ಸಂಬಂಧ ಸಾಕಷ್ಟು ಮಾಹಿತಿಯನ್ನು ಸಂಗ್ರಹ ಮಾಡಿದ್ದೇನೆ. ಅದೆಲ್ಲವನ್ನು ಎನ್ಜಿಟಿ ರಚನೆ ಮಾಡಿರುವ ಸಮಿತಿ ಮುಂದೆ ಹಂಚಿಕೊಳ್ಳುತ್ತೇನೆ. ನೇರವಾಗಿ ಎನ್ಜಿಟಿಗೂ ದಾಖಲೆಗಳನ್ನು ಸಲ್ಲಿಸಲಾಗುವುದು” ಎಂದು ಅವರು ತಿಳಿಸಿದ್ದಾರೆ.

ಈಗಲಾದರೂ ಕಣ್ತೆರೆಯಬೇಕು
ಸಿಕೆನ್ಯೂಸ್ ನೌ ಜತೆ ಮಾತನಾಡಿದ ಅವರು; “ಹಿರೇನಾಗವೇಲಿ ಸ್ಫೋಟದಿಂದಲಾದರೂ ರಾಜ್ಯ ಕಣ್ತೆರೆಯಬೇಕು. ವಿಧಾನಸೌಧದಲ್ಲಿ ಕೂತು ಆಡಳಿತ ನಡೆಸುವವರು ಬುದ್ಧಿ ಕಲಿಯಬೇಕು. ಎನ್ಜಿಟಿ ಮಧ್ಯಪ್ರವೇಶದಿಂದ ಕೆಲವರಿಗೆ ಖಂಡಿತಾ ಬಿಸಿ ತಟ್ಟಲಿದೆ. ಏಕೆಂದರೆ, ಬೆಂಗಳೂರಿನ ಕೆರೆಗಳ ರಕ್ಷಣೆ ಇರಬಹುದು, ಜಲಮೂಲಗಳ ರಕ್ಷಣೆ ಇರಬಹುದು, ಅನೇಕ ವಿಷಯಗಳಲ್ಲಿ ಹಸಿರು ನ್ಯಾಯ ಮಂಡಳಿ ಮಹತ್ವದ ಕೆಲಸಗಳನ್ನು ಮಾಡಿದೆ” ಎನ್ನುತ್ತಾರೆ ಆಂಜನೇಯ ರೆಡ್ಡಿ.
ದುರಂತದ ಹೊಣೆ ಹೊರಬೇಕಿರುವ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ, ಗಣಿ ಇಲಾಖೆ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮುಂತಾದವರೇ ಸಮಿತಿಯಲ್ಲಿ ಇದ್ದಾರೆ. ಹಾಗಾದರೆ, ಇವರಿಂದ ಸತ್ಯವಾದ ವರದಿ ಎನ್ಜಿಟಿಗೆ ಸಲ್ಲಿಕೆಯಾಗುತ್ತಾ? ಎಂಬ ಪ್ರಶ್ನೆಗೆ ಉತ್ತರಿಸಿದ ಆಂಜನೇಯ ರೆಡ್ಡಿ ಹೇಳಿದ್ದಿಷ್ಟು;
“ಸತ್ಯವಾದ ವರದಿಯನ್ನೇ ಸಲ್ಲಿಸಲೇಬೇಕು. ತೇಲಿಸಿ ವರದಿ ಕೊಡಲು ಸಾಧ್ಯವಿಲ್ಲ. ಯಾಕೆಂದರೆ, ಅವರೆಲ್ಲ ಎನ್ಜಿಟಿ ಮುಂದೆ ಆಟ ಆಡಲು ಬರುವುದಿಲ್ಲ. ಒಂದು ವೇಳೆ ವರದಿಯಲ್ಲಿ ಸತ್ಯಸಂಗತಿಗಳನ್ನು ಮರೆಮಾಚಿದರೆ, ನಾವು ಇಡೀ ಸ್ಫೋಟಕ್ಕೆ ಸಂಬಂಧಿಸಿದ ಅಂಶಗಳು, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆ, ನಿಯಮ ಬಾಹಿರ ಸ್ಫೋಟಗಳು, ಪರಿಸರ, ಕೃಷಿ, ಅಂತರ್ಜಲ, ಜಲಮೂಲಗಳು, ಜೀವವೈವಿಧ್ಯಗಳ ಮೇಲೆ ಆಗುತ್ತಿರುವ ಎಲ್ಲ ದುಷ್ಪರಿಣಾಮಗಳ ಕುರಿತ ಎಲ್ಲ ವಿವರಗಳನ್ನು ಹಸಿರು ನ್ಯಾಯ ಮಂಡಳಿಗೆ ಸಲ್ಲಿಸುತ್ತೇವೆ. ಸಮಿತಿಗೂ ಈ ಕುರಿತ ಗಮನಾರ್ಹ ದಾಖಲೆಗಳನ್ನು ಸಲ್ಲಿಸಲಾಗುವುದು” ಎಂದರು.
ಸರಕಾರದ ಅಂಕಿ-ಅಂಶಗಳು ಇವೆ
“ಸರಕಾರದ ಅಂಕಿ-ಅಂಶಗಳು ಏನು ಹೇಳುತ್ತವೆ? ಕಳೆದ ಹತ್ತು ವರ್ಷಗಳಲ್ಲಿ ಜಿಲ್ಲೆಯಲ್ಲಿ ಎಷ್ಟು ಪ್ರಮಾಣದಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಎಷ್ಟು ಕ್ವಾರಿ-ಕ್ರಷರ್ಗಳಿಗೆ ಅನುಮತಿ ನೀಡಲಾಗಿದೆ? ಒತ್ತುವರಿ ಎಷ್ಟಾಗಿದೆ? ಹಾಗೆ ನೋಡಿದರೆ, ಕಳೆದ 10 ವರ್ಷಗಳಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅಪಾರ ಪ್ರಮಾಣದಲ್ಲಿ ಕ್ವಾರಿ, ಕ್ರಷರ್ಗಳಿಗೆ ಅನುಮತಿ ನೀಡಲಾಗಿದೆ. ಅನುಮತಿ ಕೊಟ್ಟಿದ್ದು ಎಲ್ಲಿ? ಗಣಿಗಾರಿಕೆ ಮಾಡಿರುವುದು ಎಲ್ಲಿ? ತಾಂತ್ರಿಕವಾಗಿಯೇ ಎಲ್ಲ ಅಂಶಗಳನ್ನು ಸುಲಭವಾಗಿ ತಿಳಿಯಬಹುದು. ಉಪಗ್ರಹಗಳ ಮೂಲಕ ಮಾಹಿತಿ ಕಲೆ ಹಾಕಬಹುದು. ಆದ್ದರಿಂದ ಸುಳ್ಳು ಅಂಶಗಳನ್ನು ವರದಿಯಲ್ಲಿ ಸೇರಿಸಲು ಸಾಧ್ಯವಿಲ್ಲ. ಇದೇ ಪ್ರಮಾಣದಲ್ಲಿ ಕ್ಲಲು ಗಣಿಗಾರಿಕೆ ನಡೆದರೆ ಇನ್ನು ಕೆಲವೇ ವರ್ಷಗಳಲ್ಲಿ ಜಿಲ್ಲೆಯಲ್ಲಿರುವ ಎಲ್ಲ ಬೆಟ್ಟಗುಡ್ಡಗಳು ಖಾಲಿಯಾಗುತ್ತವೆ ಅನ್ನುವುದರಲ್ಲಿ ಯಾವ ಸಂಶಯವೂ ಇಲ್ಲ. ಹೀಗಾಗಿ ನಾವು ಸರಕಾರ ಎಲ್ಲ ಅಂಕಿ ಅಂಶಗಳನ್ನು ಕಲೆಹಾಕಿದ್ದೇವೆ. ಎಲ್ಲವನ್ನು ಎನ್ಜಿಟಿ ನೇಮಕ ಮಾಡಿರುವ ಸಮಿತಿಗೂ ಸಲ್ಲಿಸುತ್ತೇವೆ ಹಾಗೂ ನೇರವಾಗಿ ಎನ್ಜಿಟಿಗೂ ಸಲ್ಲಿಸುತ್ತೇವೆ” ಎನ್ನುವುದು ಆಂಜನೇಯ ರೆಡ್ಡಿ ಅವರ ಮಾತು.
ಅಗತ್ಯಬಿದ್ದರೆ ವರದಿಯನ್ನೂ ಪ್ರಶ್ನಿಸುತ್ತೇವೆ!
ರಾಜಕೀಯ ಒತ್ತಡಕ್ಕೆ ಮಣಿದು ಅಧಿಕಾರಿಗಳೇನಾದರೂ ಎನ್ಜಿಟಿ ಸಮಿತಿ ದಿಕ್ಕು ತಪ್ಪಿಸಿ ಸತ್ಯವನ್ನು ಮರೆಮಾಚುವ ವರದಿಯನ್ನೇನಾದರೂ ಎನ್ಜಿಟಿಗೆ ಸಲ್ಲಿಸಿದರೆ, ಆ ವರದಿಯನ್ನು ನಾವು ಪ್ರಶ್ನೆ ಮಾಡುತ್ತೇವೆ. ಚಿಕ್ಕಬಳ್ಳಾಪುರ ಸ್ಫೋಟ ಇಡೀ ದೇಶದಲ್ಲಿ ಸಂಚಲನ ಉಂಟು ಮಾಡಿದೆ. ಹೀಗಾಗಿ ಅಧಿಕಾರಿಗಳು ಎನ್ಜಿಟಿಯಂಥ ಅತ್ಯುನ್ನತ ನ್ಯಾಯ ಸಂಸ್ಥೆಯನ್ನು ದಾರಿ ತಪ್ಪಿಸಿದರೆ ಅವರೂ ಬೆಲೆ ತೆರಬೇಕಾಗುತ್ತದೆ. ಈಗಾಗಲೇ ಈ ಬಗ್ಗೆ ಕಾನೂನು ಪರಿಣಿತರ ನೆರವು ಪಡೆಯುತ್ತಿದ್ದೇವೆ ಎಂದು ಆಂಜನೇಯ ರೆಡ್ಡಿ ಸ್ಪಷ್ಟ ಮಾತುಗಳಲ್ಲಿ ಹೇಳಿದರು.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ರಾಜ್ಯದ ಮಾಲಿನ್ಯ ನಿಯಂತ್ರಣ ಮಂಡಳಿ, ಚಿಕ್ಕಬಳ್ಳಾಪುರ ಜಿಲ್ಲಾ ಮ್ಯಾಜಿಸ್ಟ್ರೇಟ್, ಗಣಿ ಇಲಾಖೆಯ ಮಹಾ ನಿರ್ದೇಶಕ, ಗಣಿ ಸ್ಫೋಟಗಳ ನಿಯಂತ್ರಣಾಧಿಕಾರಿ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ, ನಾಗಪುರ ಮತ್ತು ಕರ್ನಾಟಕ ಗಣಿ ನಿರ್ದೇಶಕರನ್ನೊಳಗೊಂಡ ಸಮಿತಿಯನ್ನು ಹಸಿರು ನ್ಯಾಯಮಂಡಳಿ ರಚನೆ ಮಾಡಿದೆ.
ಎನ್ಜಿಟಿ ರಚನೆ ಮಾಡಿರುವ ಸಮಿತಿಯ ಸಮನ್ವಯಕ್ಕಾಗಿ ನೋಡೆಲ್ ಏಜೆನ್ಸಿಗಳಾಗಿ ಕೆಲಸ ಮಾಡುವ ಹೊಣೆಯನ್ನು ಕೇಂದ್ರ ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳಿಗೆ ವಹಿಸಲಾಗಿದೆ. ಇನ್ನು, ಎನ್ಜಿಟಿ ಸಮಿತಿಯು ಮುಂದಿನ ಒಂದು ವಾರದೊಳಗೆ ಸ್ಥಳಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ. ಇಡೀ ದುರಂತದ ಸತ್ಯ ಸಂಗತಿ ಏನೆಂಬುದು ಇದರಿಂದ ಹೊರಬರುವ ನಿರೀಕ್ಷೆ ಇದೆ ಎಂಬುದು ಅವರ ಮಾತು.
ಇದು ಗಂಭೀರ ಸಮಸ್ಯೆ: ಡಾ.ಎಂ.ವೆಂಕಟಸ್ವಾಮಿ
ಚಿಕ್ಕಬಳ್ಳಾಪುರ ಸ್ಫೋಟದ ಸುದ್ದಿ ಕೇಳಿ ನನಗೆ ತೀವ್ರ ಆಘಾತವಾಯಿತು. ಮುನ್ನೆಚ್ಚರಿಕೆ ವಹಿಸಿದ್ದಿದ್ದರೆ ಈ ದುರಂತವನ್ನು ತಪ್ಪಿಸಬಹುದಿತ್ತು. ಈ ಘಟನೆಯ ಬಗ್ಗೆ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡು ತನಿಖೆಗೆ ಸಮಿತಿ ರಚನೆ ಮಾಡಿರುವುದು ಮಹತ್ವದ ಬೆಳವಣಿಗೆ ಎನ್ನುತ್ತಾರೆ ಹಿರಿಯ ಭೂ ವಿಜ್ಞಾನಿ ಡಾ.ಎಂ.ವೆಂಕಟಸ್ವಾಮಿ.

ಡಾ.ಎಂ.ವೆಂಕಟಸ್ವಾಮಿ
ಸರಕಾರಗಳು ಮರಳೆತ್ತುವುದನ್ನು ತಡೆಯಲು ಎಂ ಸ್ಯಾಂಡ್ ಬಳಕೆ ಮಾಡಲು ಅನುಮತಿ ಕೊಟ್ಟವು. ಆಮೇಲೆ ಕಲ್ಲು ಗಣಿಗಾರಿಕೆಗಳು ಎಗ್ಗಿಲ್ಲದೆ ಶುರುವಾದವು. ಬೆಟ್ಟಗುಡ್ಡಗಳನ್ನು ಧ್ವಂಸ ಮಾಡುವುದು ಆರಂಭವಾಯಿತು. ಹಾಗಂತ ನದಿ, ಮತ್ತಿತರೆ ಜಲಮೂಲಗಳು ಇರುವ ಜಾಗದಲ್ಲಿ ಮರಳು ತೆಗೆಯುವುದು ನಿಂತಿಲ್ಲ. ಬಳ್ಳಾರಿ ಕಬ್ಬಿಣದ ಅದಿರಿನ ಗುಡ್ಡಗಳು ರಾತ್ರೋರಾತ್ರಿ ಖಾಲಿಯಾದಂತೆ ಈಗ ರಾಜ್ಯದಲ್ಲಿ ಕಲ್ಲುಗುಡ್ಡಗಳು ಬೆಟ್ಟಗಳು ಖಾಲಿಯಾಗುತ್ತಿವೆ. ಇದರಿಂದ ಪರಿಸರದ ಸಮತೋಲನವನ್ನು ಕಾಪಾಡುವ ಗಟ್ಟಿಕಲ್ಲಿನ ಬೆಟ್ಟಗುಡ್ಡಗಳು ಕಣ್ಮರೆಯಾಗುತ್ತಿವೆ. ಕಲ್ಲನ್ನು ಪುಡಿ ಮಾಡುವಾಗ ವಿಷಕಾರಿ ಲವಣಾಂಶಗಳು ಬಿಡುಗಡೆಗೊಂಡು ನೀರು, ಗಾಳಿಯಲ್ಲಿ ಸೇರುತ್ತಿವೆ. ಕ್ವಾರಿಗಳಲ್ಲಿ, ಕ್ರಷರ್ಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ದೇಹವನ್ನೂ ಸೇರುತ್ತಿವೆ. ಇದರಿಂದ ಅವರಿಗೆ ಶ್ವಾಸಕೋಶ ಸಂಬಂಧಿ ಕಾಯಿಲೆಗಳು ಬರುತ್ತಿವೆ ಎನ್ನುತ್ತಾರೆ ಅವರು.
ಇದಕ್ಕಿಂತ ದೊಡ್ಡ ಸಮಸ್ಯೆ ಎಂದರೆ, ಬೆಟ್ಟಗುಡ್ಡಗಳನ್ನು ಸ್ಫೋಟಿಸುವುದರಿಂದ ಭೂ ಮೇಲ್ಮೈ ಸರಿದು ಅಂತರ್ಜಲ ಒಂದೆಡೆಯಿಂದ ಮತ್ತೊಂದೆಡೆಗೆ ಸರಿದುಹೋಗುತ್ತದೆ. ಭೂಮಿಯ ಪದರಗಳು ಸಡಿಲವಾಗುತ್ತವೆ. ಇದು ಆತಂಕಕಾರಿ. ಚಿಕ್ಕಬಳ್ಳಾಪುರ ಘಟನೆಯಿಂದಲಾದರೂ ರಾಜ್ಯದಲ್ಲಿ ಇಂಥ ಘಟನೆಗಳಿಗೆ ಸರಕಾರಗಳು ಕಡಿವಾಣ ಹಾಕಬೇಕು. ಇಲ್ಲದಿದ್ದರೆ ಇಂಥ ದುರಂತಗಳು ನಿಲ್ಲುವುದಿಲ್ಲ. ನ್ಯಾಯಾಂಗ ವ್ಯವಸ್ಥೆ ಹಾಗೂ ಜನರು ಪ್ರಶ್ನಿಸುವ ಮೂಲಕ ಇಂಥ ಅಕ್ರಮ ಗಣಿಗಳನ್ನು ತಡೆಯಬಹುದು ಎನ್ನುವುದು ಡಾ.ವೆಂಕಟಸ್ವಾಮಿ ಅವರ ಮಾತು.
ಅಂತಿಮವಾಗಿ, ಎನ್ಜಿಟಿ ರಚನೆ ಮಾಡಿರುವ ಸಮಿತಿಯಲ್ಲಿ ಬಹುತೇಕರು ಎಲ್ಲರೂ ಸರಕಾರಿ ಸೇವೆಯಲ್ಲೇ ಇರುವವರು. ಹೀಗಾಗಿ ಎನ್ಜಿಒ ಕಡೆಯಿಂದ ಒಬ್ಬರಾದರೂ ಈ ಸಮಿತಿಯಲ್ಲಿ ಇರಬೇಕಿತ್ತು. ಮುಖ್ಯಮಂತ್ರಿ, ಮಂತ್ರಿ ಅಧೀನದಲ್ಲಿರುವ ಅಧಿಕಾರಿಗಳಿಂದ ಸತ್ಯ ಹೊರಬರಲು ಸಾಧ್ಯವೇ? ಎಂದು ಅವರು ಪ್ರಶ್ನಿಸುತ್ತಾರೆ.
















