ಲಸಿಕಾ ಅಭಿಯಾನಕ್ಕೆ ಚುರುಕು; 8 ಪಂಚಾಯಿತಿಗಳ್ಳಲ್ಲಿ ವ್ಯಾಕ್ಸಿನ್ ಅಭಿಯಾನ
by G S Bharath Gudibande
ಗುಡಿಬಂಡೆ: ತಾಲೂಕಿನಲ್ಲಿ ಲಸಿಕಾ ಅಭಿಯಾನ ಆರಂಭವಾಗಿದ್ದು ಮೊದಲ ದಿನ ಕೇವಲ 1771 ಜನ ಮಾತ್ರ ವ್ಯಾಕ್ಸಿನೇಷನ್ ತೆಗೆದುಕೊಂಡಿದ್ದಾರೆ, ಪಟ್ಟಣ ಹಾಗೂ ಹಳ್ಳಿಗಳಲ್ಲಿ ಹೆಚ್ಚು ಜನ ವ್ಯಾಕ್ಸಿನ್ ತೆಗೆದುಕೊಂಡು ಕೊರೋನಾ ಮುಕ್ತ ತಾಲ್ಲೂಕು ಮಾಡಲು ಅಧಿಕಾರಿಗಳು ಸಹಕರಿಸಬೇಕೆಂದು ತಹಶೀಲ್ದಾರ್ ಸಿಬ್ಗತ್ ವುಲ್ಲಾ ಮನವಿ ಮಾಡಿದರು.
ಸರ್ಕಾರ 18 ವರ್ಷ ಮೇಲ್ಪಟ್ಟ ಎಲ್ಲಾ ನಾಗರೀಕರಿಗೆ ಜೂನ್ 21 ರಿಂದ ವ್ಯಾಕ್ಸಿನೇಷನ್ ಅಭಿಯಾನ ಆರಂಭ ಮಾಡಿದೆ, ಬಡವ ಶ್ರೀಮಂತ ಎನ್ನದೇ ಎಲ್ಲರೂ ವ್ಯಾಕ್ಸಿನ್ ತೆಗೆದುಕೊಂಡು ಕೊರೋನಾ ಮುಕ್ತರಾಗಬೇಕು ಹಾಗಾಗಿ ಎಲ್ಲರೂ ಸ್ವಯಂ ಪ್ರೇರಿತರಾಗಿ ವ್ಯಾಕ್ಸಿನೇಷನ್ ಮಾಡಿಸಿಕೊಳ್ಳಿ ಎಂದು ಸಲಹೆ ನೀಡಿದರು.
ವ್ಯಾಕ್ಸಿನ್ ಬಗ್ಗೆ ಅಪನಂಬಿಕೆ ಬೇಡ : ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧ ಹಳ್ಳಿಗಳಲ್ಲಿ ವ್ಯಾಕ್ಸಿನೇಷನ್ ಮಾಡಿಸಿಕೊಳ್ಳಲು ಜನ ಹಿಂಜರಿಯುತ್ತಿದ್ದಾರೆ, ಲಸಿಕೆ ಅತ್ಯಂತ ಸುರಕ್ಷಿತ. ಯಾರು ಅಂಜಬೇಕಿಲ್ಲ. ನಾವೆಲ್ಲರೂ ಸೇರಿ ಲಸಿಕೆ ಪಡೆದಿದ್ದೇವೆ. ಜನರು ಅಂದುಕೊಂಡಂತೆ ಯಾವುದೇ ರೀತಿಯ ಅಡ್ಡ ಪರಿಣಾಮ ಆಗುವುದಿಲ್ಲ.

8 ಪಂಚಾಯಿತಿಗಳ್ಳಲ್ಲಿ ವ್ಯಾಕ್ಸಿನ್ ಅಭಿಯಾನ
ತಾಲ್ಲೂಕಿನ 8 ಗ್ರಾಮ ಪಂಚಾಯಿತಿ ಹಾಗೂ ಪಟ್ಟಣದ 2 ಕಡೆ ವ್ಯಾಕ್ಸಿನ್ ಅಭಿಯಾನ ಮಾಡಲಾಗುತ್ತಿದೆ, ಸಾರ್ವಜನಿಕರ ಹಿತ ದೃಷ್ಟಿಯಿಂದ ನಿಮ್ಮ ಹತ್ತಿರದ ವ್ಯಾಕ್ಸಿನ್ ಸೆಂಟರ್ ನಲ್ಲಿ ಹಾರಿಸಿಕೊಂಡು ಇತರರು ಹಾಕಿಸಿಕೊಳ್ಳುವಂತೆ ಪ್ರೇರಣೆ ನೀಡಿ ಎಂದು ತಾಲ್ಲೂಕು ಆರೋಗ್ಯ ವೈದ್ಯಾಧಿಕಾರಿ ಡಾ.ನರಸಿಂಹಮೂರ್ತಿ ತಿಳಿಸಿದರು.
ಅಪ ಪ್ರಚಾರ ಮಾಡಿದ್ರೆ ಕ್ರಿಮಿನಲ್ ಕೇಸ್
ಲಸಿಕೆ ಪಡೆದುಕೊಂಡರೆ ಮದ್ಯಪಾನ ಮಾಡಬಾರದು, ಲಸಿಕೆ ತೆಗೆದುಕೊಂಡವರು ಕೆಲವರು ಸತ್ತು ಹೋಗಿದ್ದಾರೆ, ಪಾರ್ಶ್ವವಾಯು ಬರುವುದಂತೆ, ಪುರುಷ ಶಕ್ತಿ ಕಳೆದುಕೊಳ್ಳುವ ಸಾಧ್ಯತೆ ಮೊದಲಾದ ವದಂತಿಗಳನ್ನು ನಂಬಬೇಡಿ, ಪಟ್ಟಣ ಮತ್ತು ಹಳ್ಳಿ ಜನ ಲಸಿಕೆ ಕೇಂದ್ರಗಳಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ವ್ಯಾಕ್ಸಿನ್ ಬಗ್ಗೆ ಅಪಪ್ರಚಾರ ಮಾಡಿದ್ರೆ ಅವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲು ಮಾಡಲಾಗುತ್ತದೆ. ಅಪಪ್ರಚಾರ ಮಾಡುವವರ ವಿರುದ್ಧ ನಮಗೆ ಮಾಹಿತಿ ನೀಡಿ ಸಹಕರಿಸಬೇಕೆಂದು ಮನವಿ ಮಾಡಿದರು.
ತಾಲ್ಲೂಕಿನ ಎಲ್ಲಾ ಪಂಚಾಯತಿಗಳಲ್ಲಿ ವ್ಯಾಕ್ಸಿನ್ ಅಭಿಯಾನ ಆರಂಭವಾಗಿದೆ, ಎಲ್ಲರೂ ಬಂದು ವ್ಯಾಕ್ಸಿನ್ ಹಾಕಿಸಿಕೊಂಡು ಸೋಂಕು ಹರಡುವುದನ್ನು ತಡೆಗಟ್ಟಬೇಕು, ಗ್ರಾಮ ಮಟ್ಟದ ಟಾಸ್ಕ್ ಫೋರ್ಸ್ ಕಮಿಟಿ ಹಳ್ಳಹಳ್ಳಿ ಬೇಟಿ ಮಾಡಿ ವ್ಯಾಕ್ಸಿನ್ ಮಹತ್ವದ ಬಗ್ಗೆ ತಿಳಿಸಬೇಕು, ಅಪಪ್ರಚಾರ ಮಾಡುವವರ ವಿರುದ್ಧ ದೂರು ದಾಖಲು ಮಾಡಲಾಗುತ್ತದೆ.
–ಸಿಬ್ಗತ್ ವುಲ್ಲಾ, ತಹಶೀಲ್ದಾರ್
ವ್ಯಾಕ್ಸಿನೇಷನ್ ಅಭಿಯಾನದ ಬಗ್ಗೆ ಹಳ್ಳಿಗಳಲ್ಲಿ ಹಾಗೂ ಪಟ್ಟಣದಲ್ಲಿ ಸಾರ್ವಜನಿಕರಿಗೆ ಮಾಹಿತಿಯಿಲ್ಲ, ಡಂಗೋರ ಹೊಡೆಸುವ ಮೂಲಕ ಹೆಚ್ಚು ಪ್ರಚಾರ ಮಾಡಬೇಕು ಹಾಗೂ ವ್ಯಾಕ್ಸಿನ್ ಬಗ್ಗೆ ಹಳ್ಳಿಯ ಜನರಲ್ಲಿ ಅಪನಂಬಿಕೆ ಇದೆ. ಅದನ್ನು ಹೋಗಲಾಡಿಸುವ ಪ್ರಯತ್ನ ಅಧಿಕಾರಿಗಳು ಮಾಡಬೇಕು.
-ಜಿ.ಎನ್.ನವೀನ್
ಜಿಲ್ಲಾಧ್ಯಕ್ಷ, ಯುವ ಘಟಕ, ಜಯಕರ್ನಾಟಕ



















