ಕೇರಳದ ಜೈಹಿಂದ್ ಸುದ್ದಿವಾಹಿನಿಯಲ್ಲಿ ಹಣ ಹೂಡಿಕೆ ಪ್ರಕರಣ; ಯಾವುದೀ ಚಾನೆಲ್? ಅದರ ಪೂರ್ವಾಪರ ಏನು?
ಬೆಂಗಳೂರು: ಲೋಕಸಭೆ ಚುನಾವಣೆ ಹೊಸ್ತಿಲಲ್ಲಿಯೇ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮತ್ತೊಂದು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಸರಕಾರದ ಅನುಮತಿ ಇಲ್ಲದೆ, ಸಿಬಿಐ ಯಾವುದೇ ಪ್ರಕರಣ ದಾಖಲಿಸುವಂತಿಲ್ಲ ಎಂದು ಕರ್ನಾಟಕ ಸರಕಾರ ತೀರ್ಮಾನ ಕೈಗೊಂಡು ಆದೇಶ ಹೊರಡಿಸಿದ್ದರೂ, ಹೂಡಿಕೆಗೆ ಸಂಬಂಧಿಸಿದಂತೆ ಶಿವಕುಮಾರ್ ಮತ್ತು ಮತ್ತವರ ಕುಟುಂಬ ವರ್ಗದವರ ವಿಚಾರಣೆಯನ್ನು ಕೇಂದ್ರ ತನಿಖಾ ದಳ (ಸಿಬಿಐ) ಮುಂದುವರಿಸಿದೆ.

ಕೇರಳ ಮಲಯಾಳಿ ಚಾನೆಲ್ನಲ್ಲಿ ಹೂಡಿಕೆ
ಕೇರಳ ಮೂಲದ ʼಜೈಹಿಂದ್ʼ ಚಾನೆಲ್ನ ಜೈಹಿಂದ್ ಕಮ್ಯುನಿಕೇಷನ್ಸ್ ಪ್ರೈವೇಟ್ ಲಿಮಿಟೆಡ್ ನಲ್ಲಿ ಡಿಕೆಶಿ ಅವರು ಮಾಡಿರುವ ಹೂಡಿಕೆಯ ವಿವರವನ್ನು ಸಲ್ಲಿಸುವಂತೆ ಸಂಸ್ಥೆಗೆ ನೋಟಿಸ್ ನೀಡಲಾಗಿದೆ. ಅಖಿಲ ಭಾರತ ಕಾಂಗ್ರೆಸ್ ಮಾಲೀಕತ್ವದಲ್ಲಿ ಈ ಸಂಸ್ಥೆಯ ಮಾತೃಸಂಸ್ಥೆ ಭಾರತ್ ಬ್ರಾಡ್ʼಕಾಸ್ಟಿಂಗ್ ನೆಟ್ʼವರ್ಕ್ ಲಿಮಿಟೆಡ್. 2007 ಆಗಸ್ಟ್ 17ರಂದು ವಾಹಿನಿಯನ್ನು ಸೋನಿಯಾ ಗಾಂಧಿ ಅವರು ಉದ್ಘಾಟನೆ ಮಾಡಿದ್ದರು.
ಡಿಕೆಶಿ ಅವರ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದಲ್ಲಿ ನೋಟಿಸ್ ಜಾರಿಯಾಗಿದ್ದು, ಜನವರಿ 11ರಂದು ವಿಚಾರಣೆಗೆ ಹಾಜರಾಗುವಂತೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಬಿ.ಎಸ್.ಶಿಜು ಅವರಿಗೆ ಆದೇಶಿಸಿದೆ. ಜನವರಿ 11ರಂದು ದಾಖಲೆಗಳ ಸಮೇತ ತನ್ನ ಮುಂದೆ ಹಾಜರಾಗಬೇಕು ಎಂದು ಸಿಬಿಐ ಸೂಚನೆ ನೀಡಿದೆ.

ಶಿವಕುಮಾರ್ ಮತ್ತು ಅವರ ಪತ್ನಿ ಉಷಾ ಅವರು ಚಾನೆಲ್ನಲ್ಲಿ ಮಾಡಿರುವ ಹೂಡಿಕೆಗೆ ಪ್ರತಿಯಾಗಿ ಪಡೆದಿರುವ ಲಾಭಾಂಶ, ಷೇರು ವಹಿವಾಟು, ಹೊಂದಿರುವ ಆಸ್ತಿ ವಿವರಗಳು, ಇದಕ್ಕೆ ಸಂಬಂಧಪಟ್ಟಂತೆ ಸಂಪರ್ಕದಲ್ಲಿರುವವರ ವಿವರಗಳನ್ನು ನೀಡುವಂತೆ ಸಿಬಿಐ ಸೂಚಿಸಿದೆ. ಸಿಆರ್ ಪಿಸಿ ಸೆಕ್ಷನ್ 91ರ ಅಡಿಯಲ್ಲಿ ಚಾನೆಲ್ʼಗೆ ತನಿಖಾದಳ ನೊಟೀಸ್ ಜಾರಿ ಮಾಡಿದೆ.
ಸಿಬಿಐ ನೊಟೀಸ್ ನಮಗೆ ಸಿಕ್ಕಿದೆ. ಗಡುವಿನೊಳಗೆ ಎಲ್ಲಾ ದಾಖಲೆಗಳೊಂದಿಗೆ ಸಿಬಿಐ ಮುಂದೆ ಹಾಜರಾಗುತ್ತೇವೆ ಎಂದು ಶಿಜು ಅವರು ಕೇರಳ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಶಿಜು ಅವರು ಕೂಡ ಕೇರಳ ಕಾಂಗ್ರೆಸ್ ಪಕ್ಷದ ಪ್ರಭಾವೀ ನಾಯಕರಾಗಿದ್ದಾರೆ.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಹಾಖುವ ಉದ್ದೇಶದಿಂದ ಸಿಬಿಐ ಈ ಪ್ರಕರಣದ ಬಗ್ಗೆ ಎಲ್ಲಿಲ್ಲದ ಉತ್ಸಾಹ ತೋರುತ್ತಿದೆ ಎಂದು ಅವರು ಆರೋಪ ಮಾಡಿದ್ದಾರೆ.

ಬಿಜೆಪಿ ಸರಕಾರ ಸಿಬಿಐಗೆ ವಹಿಸಿತ್ತು
ಜೈಹಿಂದ್ ವಾಹಿನಿ ಹಾಗೂ ಅದರ ಮಾತೃಸಂಸ್ಥೆಯನ್ನು ಕೇರಳ ಮೂಲದ ಕಾಂಗ್ರೆಸ್ ನಾಯಕರು ನಡೆಸುತ್ತಿದ್ದು, ಶಿವಕುಮಾರ್ ವಿರುದ್ಧದ ಆದಾಯಕ್ಕೂ ಮೀರಿ ಆಸ್ತಿ ಗಳಿಕೆ ಪ್ರಕರಣವನ್ನು ಹಿಂದಿನ ಬಿಜೆಪಿ ಸರಕಾರ ಸಿಬಿಐಗೆ ವಹಿಸಿತ್ತು.
ಹಿಂದಿನ ಸರಕಾರ ಕಾನೂನು ರೀತ್ಯಾ ಈ ಪ್ರಕರಣವನ್ನು ಸಿಬಿಐಗೆ ವಹಿಸಿಲ್ಲ ಎಂಬ ಕಾರಣ ನೀಡಿ ಹಾಲಿ ಕಾಂಗ್ರೆಸ್ ಸರಕಾರ ಪ್ರಕರಣವನ್ನು ಹಿಂದಕ್ಕೆ ಪಡೆದಿತ್ತು. ಅದಕ್ಕಾಗಿ ಕ್ಯಾಬಿನೆಟ್ ನಿರ್ಧಾರ ಕೈಗೊಂಡಿತ್ತು.
ಬಲೆಗೆ ಕೆಡವಲು ಸಿಬಿಐ ಯತ್ನ
ಇದೀಗ ಸಿಬಿಐ, ಕೇರಳ ಕಂಪನಿಯ ಮೂಲಕ ಶಿವಕುಮಾರ್ ಅವರನ್ನು ಬಲೆಗೆ ಕೆಡವಲು ಯತ್ನಿಸುತ್ತಿದೆಯಾ ಎನ್ನುವ ಅನುಮಾನ ದಟ್ಟವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್ ಅವರು; ನನ್ನ ಗಳಿಕೆಗೆ ಸಂಬಂಧಿಸಿದಂತೆ ಎಲ್ಲಾ ದಾಖಲೆಗಳನ್ನು ನೀಡಿದ್ದರೂ ಸಿಬಿಐ ಮತ್ತೆ ನೋಟಿಸ್ ಜಾರಿ ಮಾಡುತ್ತಿರುವುದು ರಾಜಕೀಯ ಷಡ್ಯಂತ್ರ ಎಂದು ಆರೋಪಿಸಿದ್ದಾರೆ.
ನನ್ನನ್ನು ಕೆಲ ಕಾಣದ ಕೈಗಳು ಈ ಷಡ್ಯಂತ್ರದ ಹಿಂದೆ ಇದ್ದು, ರಾಜಕೀಯವಾಗಿ ನನ್ನನ್ನು ಕಟ್ಟಿಹಾಕುವ ಪ್ರಯತ್ನ ನಡೆಸಿವೆ. ಸಿಬಿಐ ತನಿಖೆ ಪೂರ್ಣಗೊಳಿಸುವ ಹಂತದಲ್ಲಿದೆ ಎಂದುಕೊಂಡು ನನ್ನನ್ನು ವಿಚಾರಣೆಗೆ ಕರೆಸಬೇಕಿತ್ತು. ಈ ಹಂತದಲ್ಲಿ ದುರುದ್ದೇಶದ ರಾಜಕೀಯ ಮನಗಂಡು ಸಿಬಿಐ ತನಿಖೆಗೆ ನೀಡಿದ್ದ ಪ್ರಕರಣವನ್ನು ಕರ್ನಾಟಕ ಸರಕಾರ ಹಿಂದಕ್ಕೆ ಪಡೆದಿದೆ ಎಂದು ಅವರು ದೂರಿದ್ದಾರೆ.
ಸಿಬಿಐ ನೋಟಿಸ್ ಪ್ರಶ್ನಿಸಿದ್ದೇನೆ
ಇಷ್ಟಾದರೂ ನನ್ನನ್ನು ಸಿಬಿಐ ಕರೆಯುತ್ತಿದೆ. ಅವರ ನೋಟಿಸ್ ಅನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದೇನೆ, ನಾನು ಹೋಗುತ್ತಿಲ್ಲ, ಅವರು ನನ್ನನ್ನು ಒಳಕ್ಕೆ ಹಾಕಿಕೊಳ್ಳಬೇಕು ಎಂದಿದ್ದರೆ ಹಾಕಿಕೊಳ್ಳಲಿ. ನಾನೇನು ಹೆದರುವುದಿಲ್ಲ, ನೋಡೋಣ, ಅವರೇನು ಮಾಡುತ್ತಾರೋ ಮಾಡಿಕೊಳ್ಳಲಿ ಎಂದು ಡಿಕೆಶಿ ಸವಾಲು ಹಾಕಿದ್ದಾರೆ.
ಅಕ್ರಮ ಆದಾಯ ಸಂಪಾದನೆ ಪ್ರಕರಣದಲ್ಲಿ ನನಗೆ ಕಿರುಕುಳ ಮುಂದುವರಿಸಿದ್ದಾರೆ. ಸರಕಾರ ಅನುಮತಿಯನ್ನು ಹಿಂದಕ್ಕೆ ಪಡೆದಿದ್ದರೂ ಸಿಬಿಐನವರು ಸಬ್ ರಿಜಿಸ್ಟ್ರಾರ್ ಕಚೇರಿ, ಸರಕಾರಿ ಕಚೇರಿ, ಸಹಕಾರಿ ಸೊಸೈಟಿ, ನಾನು ಅಧ್ಯಕ್ಷನಾಗಿರುವ ಸಂಸ್ಥೆ ಸೇರಿದಂತೆ ಅನೇಕರಿಗೆ ನೋಟಿಸ್ ಕೊಟ್ಟಿದ್ದಾರೆ. ಯಾವ ಲೆಕ್ಕಾಚಾರದ ಮೇಲೆ ಈ ನೋಟಿಸ್ ಕೊಡುತ್ತಿದ್ದಾರೆ ಎಂಬುದು ಗೊತ್ತಿಲ್ಲ. ಅವರ ಉದ್ದೇಶ ಏನೆಂಬುದೂ ತಿಳಿದಿಲ್ಲ. ಆದರೆ ಮೇಲ್ನೋಟಕ್ಕೆ ಅವರು ನನಗೆ ಹಾಗೂ ಪಕ್ಷಕ್ಕೆ ತೊಂದರೆ ನೀಡಲು ದೊಡ್ಡ ಷಡ್ಯಂತ್ರ ರೂಪಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಸಿಬಿಐ ತನಿಖೆಯನ್ನು ರಾಜ್ಯ ಸರಕಾರ ಲೋಕಾಯಕ್ತಕ್ಕೆ ಹಸ್ತಾಂತರ ಮಾಡಿದೆ, ಕರ್ನಾಟಕ ಸರಕಾರ ಸಿಬಿಐ ಪ್ರಕರಣವನ್ನು ಹಿಂಪಡೆದಿರುವುದನ್ನು ಹೈಕೋರ್ಟ್ ಒಪ್ಪಿದ್ದರೂ, ಸಿಬಿಐ ಯಾಕೆ ನೋಟಿಸ್ ನೀಡುತ್ತಿದೆ ಎಂಬುದು ಗೊತ್ತಿಲ್ಲ. ಅವರ ಬಳಿ ನನ್ನ ಎಲ್ಲಾ ದಾಖಲೆಗಳು ಇವೆ, ಲೋಕಾಯುಕ್ತಕ್ಕೆ ಪ್ರಕರಣ ಹಸ್ತಾಂತರವಾಗಿರುವ ಹಿನ್ನೆಲೆಯಲ್ಲಿ ಈ ಎಲ್ಲಾ ದಾಖಲೆಗಳನ್ನು ಸಿಬಿಐ ಲೋಕಾಯುಕ್ತಕ್ಕೆ ನೀಡಬೇಕಾಗಿದೆ ಎಂದಿದ್ದಾರೆ ಅವರು.
ನನ್ನ ಸಂಸ್ಥೆ, ಹೆಂಡತಿ, ಮಕ್ಕಳು, ಕುಟುಂಬ ಸದಸ್ಯರಿಗೆ ಕಿರುಕುಳ
ನನ್ನ ಸಂಸ್ಥೆ, ನನ್ನ ಹೆಂಡತಿ, ಮಕ್ಕಳು, ಕುಟುಂಬ ಸದಸ್ಯರು ಸೇರಿದಂತೆ ಹಲವರಿಂದ ಮಾಹಿತಿ ಕೇಳುತ್ತಿದ್ದಾರೆ. ಮೊದಲು ಈ ರೀತಿ ಮಾಡಿ ನಂತರ ಸಿಬಿಐ ನನಗೆ ನೋಟಿಸ್ ನೀಡುತ್ತಾರೆ. ಬಿಜೆಪಿಯವರು ನನ್ನನ್ನು ಜೈಲಿಗೆ ಕಳುಹಿಸುತ್ತೇವೆ ಎಂದು ಮೊದಲೇ ಹೇಳಿಕೊಳ್ಳುತ್ತಿದ್ದರು. ಇದೀಗ ಅದು ಸಾಭೀತಾಗುವ ಸಮಯ ಬಂದಿದೆ ಎಂದಿರುವ ಡಿಕೆಶಿ; ಅವರ ಆಸೆಗಳನ್ನು ಈಡೇರಿಸಿಕೊಳ್ಳಲಿ, ನಾನು ಸಿದ್ಧನಿದ್ದೇನೆ. ಅಹಮದ್ ಪಟೇಲ್ ಬದುಕಿಲ್ಲ, ಆದರೂ ನನಗೆ ರಾಜಕೀಯ ಕಿರುಕುಳ ಕೊಡುವುದನ್ನು ಮುಂದುವರೆಸಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ.
ಇದರ ಹಿಂದೆ ಯಾರೆಲ್ಲಾ ಇದ್ದಾರೆ ಎಂಬುದು ನನಗೆ ಗೊತ್ತು. ಕಾನೂನು ಇದೆ, ನನ್ನ ಕೊನೆಯ ಉಸಿರು ಇರುವವರೆಗೂ ಹೋರಾಟ ಮಾಡುತ್ತೇನೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೂ ಸಂಕಷ್ಟ
ಈ ಹಿಂದೆ ಕಾಂಗ್ರೆಸ್ ಪಕ್ಷದ ಮಾಲೀಕತ್ವದಲ್ಲಿರುವ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಕೂಡ ಇಂಥದ್ದೇ ವಿವಾದಕ್ಕೆ ಗುರಿಯಾಗಿತ್ತು. ಈಗ ಜೈಹಿಂದ್ ಸಂಕಷ್ಟಕ್ಕೆ ಸಿಲುಕಿದೆ.

















