Lead Photo: CKPhotography ಸಿಕೆಪಿ@ckpixels
ಗುಡಿಬಂಡೆ: ಕೆಲ ವರ್ಷಗಳ ಹಿಂದೆ ಕುಡುಕರ, ಇಸ್ಪೀಟು ವ್ಯಸನಿಗಳ, ಕಳ್ಳಕಾಕರ ಕರಾಳ ಅಡ್ಡೆಯಾಗಿ ಪಾಳು ಬಿದಿದ್ದ ಐತಿಹಾಸಿಕ ದೇಗುಲವೊಂದು ಪೂರ್ವ ವೈಭವದೊಂದಿಗೆ ಜೀರ್ಣೋದ್ಧಾರಗೊಂಡು ಮರಳಿ ಪುಟಿದೆದ್ದು ನಿಂತಿದೆ. ಅದೂ ಅಮಾನಿಭೈರ ಸಾಗರವೆಂಬ ಐತಿಹಾಸಿಕ ಕೆರೆಯ ಸಮೃದ್ಧ ಜಲರಾಶಿಯ ಮುಂದೆ ಹಾಗೂ ಮಳೆಗಾಲ ಬಂದರೆ ಸಮೃದ್ಧವಾಗಿ ಹರಿದುಬರುವ ಅರ್ಕಾವತಿ ಎಂಬ ನದಿಯ ಅಂಗಳದಲ್ಲಿ.
CKPhotography ಸಿಕೆಪಿ@ckpixels
ಇಷ್ಟಕ್ಕೂ ಆ ಪಟ್ಟಣದ ಹೆಸರು ಗುಡಿಬಂಡೆ. ಇಡೀ ರಾಜ್ಯದಲ್ಲಿಯೇ ಒಂದು ಕಾಲಕ್ಕೆ ಅತ್ಯಂತ ಹಿಂದುಳಿದ ತಾಲ್ಲೂಕು. ಯಾರಿಗೂ ಬೇಡವಾಗಿದ್ದ ಗಡಿಪಟ್ಟಣ. ದಶಕಗಳ ಕಾಲ ಅಭಿವೃದ್ಧಿಯಲ್ಲಿ ನಿರಂತರ ನಿರ್ಲಕ್ಷ್ಯಕ್ಕೀಡಾದ ನತದೃಷ್ಟ ನೆಲ. ಆದರೆ, ಈಗ ಎಲ್ಲವೂ ಬದಲಾಗಿದೆ. ಅಭಿವೃದ್ಧಿಗೆ ಚಕ್ರ ಬಂದಿದೆ. ಜನರಲ್ಲೂ ಅರಿವು ಹೆಚ್ಚಿದೆ. ಗುಡಿಬಂಡೆಗೂ ಪೂರ್ವಗೌರವ ಮರಳಿದೆ. ಪ್ರವಾಸಿಗರಂತೂ ಮುಗಿಬಿದ್ದು ಬರುತ್ತಿದ್ದಾರೆ. ಇಲ್ಲಿನ ಸುರಸದ್ಮಪದ್ಮಗಿರಿ, ಭಾರತ ಭೂಪಟದಂತೆ ಕಾಣುವ ಅಮಾನಿಭೈರ ಸಾಗರ, ಸುತ್ತಲೂ ಹರಡಿಕೊಂಡಿರುವ ಅಪರೂಪದ ಗಿರಿಸಾಲು, ಅವುಗಳ ಮೈದುಂಬಿಕೊಂಡ ಹಸಿರಸಿರಿ ಪ್ರವಾಸಿಗರಿಗೆ ಶನಿವಾರ, ಭಾನುವಾರ ಬಂತೆಂದರೆ ಸ್ವರ್ಗಸದೃಶ ಸಂತಸ ನೀಡುತ್ತಿರುವ ತಾಣಗಳು.
ಇದೀಗ, ಪಾಳುಬಿದ್ದು ವಿನಾಶದ ಅಂಚಿನಲ್ಲಿದ್ದ ಶ್ರೀ ವೈದ್ಯನಾಥೇಶ್ವರ ದೇಗುಲವು ಜೋರ್ಣೋದ್ಧಾರವಾಗಿದೆಯಲ್ಲದೆ, ಗುಡಿಬಂಡೆಯ ಹೆಗ್ಗುರಿಗಳಿಗೆ ಇನ್ನೊಂದು ಗರಿ ಸೇರಿದಂತೆ ಆಗಿದೆ. ಇದೇ ನವೆಂಬರ್ 21, 22 ಮತ್ತು 23ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಜೀರ್ಣೋದ್ಧಾರವಾಗಿರುವ ದೇಗುಲದಲ್ಲಿ ಶಿವಲಿಂಗ ಪ್ರತಿಷ್ಠಾಪನೆಯ ದೈವಕಾರ್ಯ ನಡೆಯಲಿದೆ.
16ನೇ ಶತಮಾನದ ದೇಗುಲ
ಮಹತ್ತ್ವದ ಐತಿಹಾಸಿಕ ಹಿನ್ನೆಲೆ ಇರುವ ಈ ಭವ್ಯ ದೇಗುಲದ ಮೂಲ ಕಟ್ಟಡ ನಿರ್ಮಾಣವಾಗಿದ್ದು 16ನೇ ಶತಮಾನದಲ್ಲಿ. ವಿಜಯನಗರ ಅರಸರ ಸಾಮಂತರಾಗಿದ್ದ ಪಾಳೇಯಗಾರ ಭೈರೇಗೌಡರು ಈ ಆಲಯವನ್ನು ಕಟ್ಟಿಸಿ ಶಿವಲಿಂಗವನ್ನು ಪ್ರತಿಷ್ಠಾಪನೆ ಮಾಡಿಸಿದ್ದರು.

ಇಷ್ಟಕ್ಕೂ ಆ ದೇಗುಲವನ್ನು ಕಟ್ಟಿಸಲೊಂದು ಕಾರಣವಿತ್ತೆಂದು ಇತಿಹಾಸ ಹೇಳುತ್ತದೆ. ಅದೇ ಜಾಗಕ್ಕೆ ನಂದಿಗಿರಿಯಲ್ಲಿ ಹುಟ್ಟಿ ಮಳೆಗಾಲದಲ್ಲಿ ಮಾತ್ರ ತೀವ್ರಗತಿಯಲ್ಲಿ ಹರಿದು ಬರುತ್ತಿದ್ದ ಆರ್ಕಾವತಿ ನದಿಗೆ ಅಡ್ಡಲಾಗಿ ಆ ದಿನಗಳಲ್ಲಿಯೇ ಜನ-ಜಾನುವಾರುಗಳ ನೀರಿಗೆ, ಬೇಸಾಯಕ್ಕೆ ಆಸರೆಯಾಗಲಿ ಎಂದು ಭೈರೇಗೌಡರು ಅಮಾನಿಭೈರ ಸಾಗರವೆಂಬ ವಿಶಾಲ ಕೆರೆಯನ್ನು ಕಟ್ಟಿಸಿದರು. ಆ ಕೆರೆ ಕಾಮಗಾರಿ ನಡೆಯುತ್ತಿದ್ದ ವೇಳೆಯಲ್ಲೇ ಯಾವುದೋ ಮಾರಣಾಂತಿಕ ಸೋಂಕು ಕಾಣಿಸಿಕೊಂಡು ಕೆಲಸ ಮಾಡುತ್ತಿದ್ದ ಕಾರ್ಮಿಕರನ್ನು ಕೊಲ್ಲತೊಡಗಿತು. ಒಂದು ರಾತ್ರಿ ಪಾಳೆಯಗಾರನಿಗೆ ಕನಸುಬಿದ್ದಿತೆಂದೂ, ಮರುದಿನ ಬೆಳಗ್ಗೆ ಹೊತ್ತಿಗೆ ವೃದ್ಧನೊಬ್ಬ ಬಂದು ಕೆರೆಯ ಏರಿಯಲ್ಲಿ ಕಾರ್ಮಿಕರಿಗೆ ಚಿಕಿತ್ಸೆ ನೀಡುತ್ತಿದುದ್ದನ್ನು ಕಂಡನಂತೆ. ಆ ಅಜ್ಜನನ್ನು ಪಾಳೆಯಗಾರ ಸಮೀಪಿಸುವಷ್ಟರಲ್ಲಿ ಆತ ಅದೃಶ್ಯನಾದನೆಂಬ ಕಥೆ ಇದೆ. ಸಾಕ್ಷಾತ್ ಆ ಪರಮಶಿವನೇ ಪ್ರತ್ಯಕ್ಷನಾಗಿ ಬಂದು ತನ್ನ ಕೆಲಸಗಾರರಿಗೆ ಚಿಕಿತ್ಸೆ ನೀಡಿ ಕೆರೆಯ ಕೆಲಸವನ್ನು ಮುಂದುವರಿಯುವಂತೆ ಮಾಡಿದ ಎಂದು ನಂಬಿದ ಪಾಳೆಯಗಾರ, ಕೂಡಲೇ ಕೆರೆ ಬಲಭಾಗದಲ್ಲಿ ಕೆರೆಕೋಡಿ ಹರಿದಾಗ ಶಿವಲಿಂಗಕ್ಕೆ ಗಂಗೆ ಸ್ಪರ್ಷಿಸುವಂತೆ ಯೋಜನೆ ರೂಪಿಸಿ ಅಲ್ಲಿದ್ದ ಪುಟ್ಟ ಗುಡ್ಡದ ಪಕ್ಕದಲ್ಲಿ ಪೂರ್ವಾಭಿಮುಖಿಯಾಗಿ ಶ್ರೀ ವೈದ್ಯವಾಥೇಶ್ವರ ದೇಗುಲವನ್ನು ನಿರ್ಮಿಸಿದ. ಹೀಗೆ 16ನೇ ಶತಮಾನದಿಂದಲೂ ಕೆರೆ ಸಮೃದ್ಧವಾಗಿತ್ತು, ಆ ಶಿವಲಿಂಗಕ್ಕೂ ನಿರಂತರ ಪೂಜೋಪಚಾರ ನಡೆಯುತ್ತಿತ್ತೆಂದೂ ಸ್ಥಳೀಯರು ಹೇಳುತ್ತಾರೆ. ಆದರೆ, ಕಳೆದ ಮೂರು-ನಾಲ್ಕು ದಶಕಗಳಿಂದೀಚೆಗೆ ಪೂಜೆ ಪುನಸ್ಕಾರ ಸ್ಥಗಿತಗೊಂಡ ಪರಿಣಾಮ ಭಕ್ತರೂ ಬರುವುದು ನಿಂತು ದೇಗುಲ ಪಾಳು ಬಿದ್ದಿತು.
ಐದು ಶತಮಾನ ಕಳೆದು, ಅದರ ಮೇಲೊಂದು ಶತಮಾನ ಬಂದ ಮೇಲೆ ಅಂದರೆ; ಈಗ, ಆ ವೈದ್ಯನಾಥೇಶ್ವರ ಸ್ವಾಮಿಗೆ ಮತ್ತೆ ಗುಡಿ ತಲೆಎತ್ತಿ ನಿಂತಿದೆ. ನಾಮಾವಶೇಷವಾಗಿದ್ದ ಜಾಗದಲ್ಲಿ ಅದೇ ಐತಿಹಾಸಿಕ ಕುರುಹುಗಳನ್ನು ಮತ್ತೆ ನೆನಪಿಸುವ, ಆ ಪಾಳೆಯಗಾರನ ಶಿವಭಕ್ತಿಯನ್ನು ಪುನರುಜ್ಜೀವನಗೊಳಿಸುವ ಕೆಲಸವನ್ನು ಮಾಜಿ ಯೋಧರೊಬ್ಬರು ಶಿವಪ್ರೇರಣೆಯೊಂದಿಗೆ ಮಾಡಿದ್ದಾರೆ. ಈಗ ಜೀರ್ಣೋದ್ಧಾರಗೊಂಡ ಶಿವಾಲಯ ಸಿದ್ಧವಾಗಿದ್ದು, ಭಕ್ತರಿಗೆ ಕೆಲ ದಿನಗಳಲ್ಲೇ ತೆರೆದುಕೊಳ್ಳಲಿದೆ. ಈ ಕೆಲಸವನ್ನು ನಾವೆಲ್ಲರೂ ಮೆಚ್ಚಿಕೊಳ್ಳಬೇಕು ಎನ್ನುತ್ತಾರೆ ಪತ್ರಕರ್ತ ವೆಂಕಟೇಶ ಮೂರ್ತಿ.
ಯಾರು ಆ ಯೋಧ?
ವಿ.ಲಕ್ಷ್ಮೀನಾರಾಯಣ
ಅವರ ಹೆಸರು ವಿ.ಲಕ್ಷ್ಮೀನಾರಾಯಣ. ನಿವೃತ್ತ ಸೇನಾನಿ. ಭಾರತೀಯ ಸೇನೆಯಲ್ಲಿದ್ದ ಅವರು 1999ರಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ಕಾರ್ಗಿಲ್ ಯುದ್ಧದಲ್ಲಿಯೂ ಭಾಗಿಯಾಗಿದ್ದರು. ನಿವೃತ್ತಿಯ ನಂತರ ಹುಟ್ಟೂರಿಗೆ ವಾಪಸ್ ಬಂದ ಅವರಿಗೆ ಈ ದೇಗುಲವನ್ನು ಕಂಡು ಬೇಸರವಾಯಿತು ಮಾತ್ರವಲ್ಲ, ಇಂಥ ಐತಿಹಾಸಿಕ ಶಿವಾಲಯವನ್ನು ಜೀರ್ಣೋದ್ಧಾರ ಮಾಡಬಹುದೇ ಎಂಬ ಆಲೋಚನೆ ಬಂತು. ಗೆಳೆಯರ ಜತೆ ಇದನ್ನು ಹಂಚಿಕೊಂಡಾಗ ಉತ್ತಮ ಸ್ಪಂದನೆ ಸಿಕ್ಕಿದೆ. ಶಿವಾಲಯದ ಮರು ನಿರ್ಮಾಣಕ್ಕೆ ನಾಂದಿ ಹಾಡಿದ್ದು ಹೀಗೆ.
ತಮ್ಮ ಪ್ರಯತ್ನ ಮತ್ತು ಅವರಿವರ ನೆರವಿನಿಂದ ಆಲಯ ನಿರ್ಮಾಣದ ಕಥೆಯನ್ನು ಲಕ್ಷ್ಮೀನಾರಾಯಣ ಅವರು ಸಿಕೆನ್ಯೂಸ್ ನೌ ಜತೆ ಹಂಚಿಕೊಂಡಿದ್ದು ಹೀಗೆ;
ಪಾಳುಬಿದ್ದಿತ್ತು ಶಿವಾಲಯ
“ಬಾಲ್ಯದಿಂದಲೂ ನಾನು ಈ ಶಿವಾಲಯವನ್ನು ನೋಡಿಕೊಂಡೇ ಬೆಳೆದವನು. ಮೊದಲು ಅದು ಪಾಳುಬಿದ್ದಿದ್ದಾಗ ನೋಡಿದಾಗಲೆಲ್ಲ ಬೇಸರವಾಗುತ್ತಿತ್ತು. ಕ್ರಮೇಣ ಆ ಆಲಯಕ್ಕೆ ಐತಿಹಾಸಿಕ ಮಹತ್ತ್ವವಿದೆ ಎಂದು ಗೊತ್ತಾದಾಗ ನಿಜಕ್ಕೂ ನೋವಾಯಿತು. ಜತೆಗೆ, ಪ್ರತಿವರ್ಷ ಮಳೆಗಾಲ ಬಂದಾಗ ಕೆರೆ ತುಂಬಿದರೆ ಒಬ್ಬರೋ ಇಬ್ಬರೋ ಆ ಕೆರೆ ಪಾಲಾಗುವುದು ಸಾಮಾನ್ಯವೆಂಬಂತೆ ಆಗಿತ್ತು. ನಾನು ಎಸ್ಸೆಸೆಲ್ಸಿ ಓದುವಾಗ (1986-87) ಗೆಳೆಯರೆಲ್ಲ ಸೇರಿ ಹಾಳಾಗಿದ್ದ ದೇಗುಲವನ್ನು ಕೈಲಾದಷ್ಟು ದುರಸ್ಥಿ ಮಾಡಿ ಶಿವಲಿಂಗವನ್ನು ಪ್ರತಿಷ್ಠಾಪನೆ ಮಾಡಿದ್ವಿ. ಪಿಯುಸಿಗೆ ಬರುವಷೊತ್ತಿಗೆ ಯಾರೋ ಮತ್ತೆ ಅದೆಲ್ಲ ಕಿತ್ತುಹಾಕಿದ್ದರು. ಪುನಾ ಗೆಳೆಯರೆಲ್ಲ ಸೇರಿ ರಿಪೇರಿ ಮಾಡಿದೆವು. ಬಳಿಕ ನಾನು ಸೇನೆಗೆ ಸೇರಿಕೊಂಡೆ. ದೇವಾಲಯ ಹಾಗೆಯೇ ಪಾಳುಬಿದ್ದಿತ್ತು. ಆಗಾಗ ಊರಿಗೆ ಬಂದಾಗ ಅದನ್ನು ನೋಡಿದಾಗ ತುಂಬಾ ನೋವಾಗುತ್ತಿತ್ತು. ಇನ್ನು ಕೆರೆ ತುಂಬಿದಾಗ ಆ ದೇಗುಲವಿದ್ದ ತಾಣವನ್ನು ನೋಡಲು ಎರಡು ಕಣ್ಣು ಸಾಲದೇನೋ ಎನಿಸುತ್ತಿತ್ತು. ಗುಡಿಬಂಡೆಯ ಪ್ರವೇಶದ್ವಾರದಲ್ಲೇ ಇದ್ದ ಆ ಶಿವಾಲಯ ದೇಶದ ಯಾವುದೇ ಮೂಲೆಯಲ್ಲಿದ್ದರೂ ಸದಾ ನನ್ನ ಮನಸ್ಸಿನಲ್ಲಿ ತುಂಬಿರುತ್ತಿತ್ತು.”
2014ರಿಂದ 2020
“ಹದಿನೇಳು ವರ್ಷಗಳ ಸೇನೆ ಸೇವೆ ಮುಗಿಸಿಕೊಂಡು 2005ರಲ್ಲಿ ನಾನು ಗುಡಿಬಂಡೆಗೆ ವಾಪಸ್ ಬಂದೆ. ದಿನೇದಿನೆ ಆ ದೇಗುಲವು ನನ್ನಲ್ಲಿ ಅನೇಕ ತುಮುಲಗಳನ್ನು ಹುಟ್ಟುಹಾಕುತ್ತಿತ್ತು. ಇಂಥ ಹೊತ್ತಿನಲ್ಲೇ ನಮ್ಮ ಹಳ್ಳಿಯಲ್ಲಿ ಗುಂಡಾಲಚ್ಚಮ್ಮ ದೇವಿಯ ದೇಗುಲ ಪಾಳು ಬಿದ್ದಿತ್ತು. ಅದನ್ನು ಜೀರ್ಣೋದ್ಧಾರ ಮಾಡಿದ ಮೇಲೆ ಎಲ್ಲವೂ ಕೂಡಿಬಂದ ಹಾಗೆ ವೈದ್ಯನಾಥೇಶ್ವರ ದೇಗುಲ ಕೆಲಸವೂ ಶುರುವಾಗುವ ಹಾಗೆ ಕಾಣಿಸಿತು. ಎಲ್ಲರ ಪ್ರೋತ್ಸಾಹ-ಸಹಕಾರವೂ ಸಿಕ್ಕಿತು. 2014ರಲ್ಲಿ ಜೀರ್ಣೋದ್ಧಾರ ಕೆಲಸ ಆರಂಭವಾಯಿತು. ಆರು ವರ್ಷಗಳಲ್ಲಿ ಶಿವಾಲಯ ಮರು ನಿರ್ಮಾಣ ಪೂರ್ಣವಾಗಿದೆ.”
ಈ ದೇಗುಲ ಸಿದ್ಧವಾದ ಮೇಲೆ ಗುಡಿಬಂಡೆಗೆ ಹೊಸಕಳೆ ಬಂದಿದೆ. ಪ್ರತಿಯೊಬರು ಉತ್ತಮ ಕಾರ್ಯ ಎನ್ನುತ್ತಿದ್ದಾರೆ. ಆ ದೇವಾಲಯದ ಮತ್ತು ಕೆರೆಯ ಪರಿಸರವನ್ನು ಅಭಿವೃದ್ಧಿಪಡಿಸಲು ಪ್ರವಾಸೋದ್ಯಮ ಇಲಾಖೆ ಒಂದು ಕೋಟಿ ರೂ. ಅನುದಾನ ಪ್ರಕಟಿಸಿದೆ. ಈ ಗುಡಿಯ ಜೀರ್ಣೋದ್ಧಾರದಿಂದ ಪಟ್ಟಣಕ್ಕೂ ಒಂದು ದೈವಶಕ್ತಿ ಬರಲಿದೆ ಎಂಬ ನಂಬಿಕೆ ನನ್ನದು.
ಐತಿಹಾಸಿಕ ಕುರುಹುಗಳಿಗೆ ಧಕ್ಕೆ ಇಲ್ಲ
“ದೇವಾಲಯದ ಐತಿಹಾಸಿಕ ಕುರುಹುಗಳಿಗೆ ನಾವು ಧಕ್ಕೆ ಉಂಟು ಮಾಡಿಲ್ಲ. ಶಿಥಿಲವಾಗಿದ್ದ ಮಣ್ಣಿನ ಗೋಡೆಗಳನ್ನು ತೆಗೆದು ಐತಿಹಾಸಿಕ ಪ್ರಾಕಾರವನ್ನು ಅಂದರೆ; ಕಲ್ಲು ಸ್ತಂಭಗಳನ್ನು ಹಾಗೆಯೇ ಉಳಿಸಿಕೊಂಡು ಇಟ್ಟಿಗೆ ಗೋಡೆಯನ್ನು ನಿರ್ಮಿಸಲಾಗಿದೆ. ಗುಡಿಯ ಮೇಲೆ ಗೋಪುರ, ಧ್ವಜಸ್ತಂಭವನ್ನು ಹೊಸದಾಗಿ ನಿರ್ಮಿಸಲಾಗಿದೆ. ಸುತ್ತಲೂ ಬಲಿಷ್ಠವಾದ ಕಾಂಪೌಂಡನ್ನೂ ಕಟ್ಟಲಾಗಿದೆ.”
ಹರಿಧ್ವಾರದಿಂದ ಶಿವಲಿಂಗ, ನಂದಿ
ಪಾಳೆಯಗಾರರಾದ ಭೈರೇಗೌಡರು ಪ್ರತಿಷ್ಠಾಪನೆ ಮಾಡಿದ್ದ ಶಿವಲಿಂಗವನ್ನು, ಅದರ ಕೆಳಗಿನ ಪೀಠವನ್ನೂ ದುಷ್ಕರ್ಮಿಗಳು ಹಾಳು ಮಾಡಿದ್ದಾರೆ. ಹೀಗಾಗಿ ಹೊಸ ಪೀಠದ ಮೇಲೆ ನೂತನ ಶಿವಲಿಂಗವನ್ನು ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಇನ್ನೂ ಹರಿಧ್ವಾರದಲ್ಲಿ ತಯಾರಾದ ಶ್ವೇತವರ್ಣದ ಅಮೃತಶಿಲೆಯ ಶಿವಲಿಂಗ ಹಾಗೂ ನಂದಿಯನ್ನು ಇಲ್ಲಿ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಒಟ್ಟಾರೆಯಾಗಿ, ಈ ದೇಗುಲ ಮರು ನಿರ್ಮಾಣ ನನ್ನ ಜೀವಿತಾವಧಿಯ ಕನಸು. ಇವತ್ತು ನನಸಾಗುತ್ತಿದೆ. ಬದುಕು ಸಾರ್ಥಕವೆನಿಸುತ್ತಿದೆ” ಎಂದು ಹೇಳುತ್ತಾರೆ ಲಕ್ಷ್ಮೀನಾರಾಯಣ.




















