ಚಿಕ್ಕಬಳ್ಳಾಪುರ ಜಿಲ್ಲೆಯ ಕೀರ್ತಿ ಹೆಚ್ಚಿಸಿದ ಹಾಗೂ ನಾಡು ಕಂಡ ಶ್ರೇಷ್ಠ ಶಿಕ್ಷಣತಜ್ಞ, ವಿಚಾರವಾದಿ, ಸ್ವಾತಂತ್ರ್ಯ ಹೋರಾಟಗಾರ, ಅಪ್ಪಟ ಗಾಂಧೀವಾದಿ, ಪದ್ಮಭೂಷಣ ಡಾ.ಎಚ್.ನರಸಿಂಹಯ್ಯ ಅವರ ಜನ್ಮದಿನ ಇಂದು.
by DG Pavan Kalyan Bagepalli
ಅವಿಭಜಿತ ಕೋಲಾರ ಜಿಲ್ಲೆಯ (ಈಗ ಚಿಕ್ಕಬಳ್ಳಾಪುರ ಜಿಲ್ಲೆ) ಗೌರಿಬಿದನೂರು ತಾಲೂಕಿನ ಹೊಸೂರು ಗ್ರಾಮದಲ್ಲಿ 1920 ಜೂನ್ 6ರಂದು ಅತಿಬಡ ಕುಟುಂಬದಲ್ಲಿ ಹುಟ್ಟಿದ ನರಸಿಂಹಯ್ಯನವರು ಬದುಕಿದ್ದರೆ ಕಳೆದ 2020 ಶನಿವಾರ (ಜೂನ್ 6) ನೂರು ವರ್ಷ ಪೂರೈಸಿ, ಜನ್ಮ ಶತಮಾನೋತ್ಸವ ಆಚರಿಸಿಕೊಳ್ಳುತ್ತಿದ್ದರು.
ಸರಳ ಬದುಕು, ಉದಾತ್ತ ಮತ್ತು ಪ್ರಖರ ವೈಚಾರಿಕ ಚಿಂತನಾ ಮನೋಭಾವದಿಂದಲೇ ಜನಮಾನಸದಲ್ಲಿ ಮಹಾನ್ ಚೇತನವಾದವರು ಎಚ್.ಎನ್ ಅವರು.
ಹೊಸೂರಿನ ಹಿಂದುಳಿದ ವರ್ಗದ ಹನುಮಂತಪ್ಪ-ವೆಂಕಟಮ್ಮ ದಂಪತಿಯ ಪುತ್ರರಾದ ನರಸಿಂಹಯ್ಯನವರು ಬಡತನದ ಕೆಂಡ ತುಳಿದವರು. ‘ಹೋರಾಟದ ಹಾದಿ’ಯಲ್ಲಿ ಸತ್ಯನಿಷ್ಠುರವಾದ ವೈಚಾರಿಕ ಬದ್ಧತೆಯ ಬದುಕಿನ ಮೂಲಕವೇ ಶಿಕ್ಷಣ ಕ್ಷೇತ್ರದಲ್ಲಿ ಮೇರು ಪರ್ವತವಾದ ವ್ಯಕ್ತಿತ್ವ ಅವರದ್ದು.

ವಿದೇಶದಲ್ಲಿ ಉನ್ನತ ವ್ಯಾಸಂಗ, ಉನ್ನತ ಹುದ್ದೆಗಳು, ಅಗಣಿತ ಗೌರವಗಳು ಅರಸಿ ಬಂದರೂ ಬದುಕಿನುದ್ಧಕ್ಕೂ ಯಾವತ್ತೂ ಆಡಂಬರ ತೋರದೆ, ಗಾಂಧೀಮಾರ್ಗದ ಸರಳ ಬದುಕು ಮೈಗೂಡಿಸಿಕೊಂಡು ಇಡೀ ಜೀವನ ಶಿಕ್ಷಣಕ್ಕೆ ಮೀಸಲಿಟ್ಟು, ಸಂತನಂತೆ ಬದುಕಿದ ಎಚ್.ಎನ್ ಅವರ ಬದುಕೇ ಯುವಪಿಳಿಗೆಗೆ ಒಂದು ಆದರ್ಶದ ನೈಜಕಥೆ.
ವಿದ್ಯಾರ್ಥಿ ದೆಸೆಯಲ್ಲಿ ವಿವಿಧ ಉಚಿತ ವಿದ್ಯಾರ್ಥಿ ನಿಲಯಗಳಲ್ಲಿದ್ದ ನರಸಿಂಹಯ್ಯ ಅವರು ಅಧ್ಯಾಪಕರಾದ ಮೇಲೂ 1946ರಿಂದ ಕೊನೆಯುಸಿರೆಳೆಯುವವರೆಗೂ (2005ರ ಜನವರಿ 31) ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜಿನ ವಿದ್ಯಾರ್ಥಿ ನಿಲಯದ ಪುಟ್ಟ ಕೊಣೆಯಲ್ಲಿಯೇ ಬದುಕಿದ್ದು ಆದರ್ಶದ ಅತ್ಯುನ್ನತ ಮಾದರಿ.
ಅವಿವಾಹಿತರಾಗಿದ್ದ ನರಸಿಂಹಯ್ಯ ಅವರು ವಿಜ್ಞಾನ ಮತ್ತು ವೈಜ್ಞಾನಿಕ ವಿಧಾನದಲ್ಲಿ ದೃಢವಾದ ನಂಬಿಕೆ ಹೊಂದಿದ್ದರು. ಶೂನ್ಯದಿಂದ ಏನನ್ನೂ ಸೃಷ್ಟಿಸಲು ಸಾಧ್ಯವಿಲ್ಲ. ಜನರ ಅಜ್ಞಾನವನ್ನು ಬಂಡವಾಳವನ್ನಾಗಿಸಿಕೊಂಡು ಶೋಷಣೆ ಮಾಡುವ ಮೌಢ್ಯದ ವಿರುದ್ಧ ಸತತ ಹೋರಾಡುತ್ತ, ಪಟ್ಟಭದ್ರ ಹಿತಾಸಕ್ತಿಗಳಿಂದ ಮುಗ್ಧ ಜನರನ್ನು ರಕ್ಷಿಸಬೇಕು ಎಂದು ಪ್ರತಿಪಾದಿಸಿದವರು ಅವರು.
ಕುಗ್ರಾಮದ ಬಡ ಪೋಷಕರ ದಟ್ಟ ದಾರಿದ್ರ್ಯದ ನಡುವೆಯೂ ತಮ್ಮ ಪ್ರತಿಭೆಯಿಂದಲೇ ದೈತ್ಯ ಪ್ರತಿಭಾ ಸಂಪನ್ನರಾಗಿ ಬೆಳೆದ ಅವರು, ತಮ್ಮ 85 ವರ್ಷಗಳ ಬದುಕಿನಲ್ಲಿ 62 ವರ್ಷಗಳ ಕಾಲ ವಿದ್ಯಾರ್ಥಿನಿಲಯಗಳಲ್ಲೇ ಜೀವನ ನಡೆಸಿದರು.
ನಾಸ್ತಿಕರಾಗಿದ್ದ ಎಚ್.ಎನ್ ಅಖಂಡ ಬ್ರಹ್ಮಚರ್ಯದ ಬದುಕಿನಲ್ಲಿ ಸಮಾಜದಿಂದ ಪಡೆದ ಎಲ್ಲವನ್ನೂ ಸಮಾಜಕ್ಕೆ ಮರಳಿಸಿ ನಿರ್ಗಮಿಸಿದ ನಿಸ್ಪೃಹರು. ಅವರ ಹುಟ್ಟೂರಿನಲ್ಲಿ ಪುಟ್ಟದೊಂದು ಹಳೆಯ ಮನೆ ಹೊರತುಪಡಿಸಿದರೆ ಅವರ ಕುಟುಂಬಕ್ಕೆ ಒಂದಿಂಚೂ ಭೂಮಿ ಸಹ ಇಲ್ಲ.
ನರಸಿಂಹಯ್ಯ ಅವರಿಗೆ ಒಬ್ಬ ಸಹೋದರಿ ಇದ್ದರು. ಅವರು ಸಹ ಬಹುಕಾಲದ ಹಿಂದೆಯೇ ತೀರಿ ಹೋಗಿದ್ದಾರೆ. ಹೀಗಾಗಿ, ವಾರಸುದಾರರಿಲ್ಲದ ಅವರ ಮನೆ ಶಿಥಿಲಾವವಸ್ಥೆಯಿಂದ ಕುಸಿದು ಬೀಳುವ ಹಂತ ತಲುಪಿತ್ತು. ನಂತರ ಅವರ ಜನ್ಮ ಶತಮಾನೋತ್ಸವ ನಂತರ ಸ್ಥಳಿಯ ಶಾಸಕ ಶಿವಶಂಕರ ರೆಡ್ಡಿ ಜೀರ್ಣೋದ್ಧಾರ ಮಾಡಿಸಿ ಸಂರಕ್ಷಣೆ ಮಾಡಿಸಿದ್ದಾರೆ.
ಅವರ ಬಾಲ್ಯ, ಬವಣೆಯ ಬದುಕು
ಹುಟ್ಟೂರು ಹೊಸೂರಿನಲ್ಲಿ ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸ ಮುಗಿಸಿ, 1935ರಲ್ಲಿ ಬೆಂಗಳೂರಿನ ನ್ಯಾಷನಲ್ ಹೈಸ್ಕೂಲಿಗೆ ಸೇರಿದ ನರಸಿಂಹಯ್ಯ ಅವರು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಭೌತಶಾಸ್ತ್ರದ ಬಿ.ಎಸ್.ಸಿ (ಆನರ್ಸ್) ಮತ್ತು ಎಂ.ಎಸ್ಸಿ ಶಿಕ್ಷಣ ಪಡೆದರು.
1946ರಲ್ಲಿ ಬೆಂಗಳೂರು ಬಸವನಗುಡಿ ಕಾಲೇಜಿನಲ್ಲಿ ಭೌತಶಾಸ್ತ್ರ ಅಧ್ಯಾಪಕ, ಪ್ರಾಧ್ಯಾಪಕರಾಗುವ ಜತೆಗೆ 12 ವರ್ಷ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದರು. 1957ರಿಂದ 1960 ರವರೆಗೆ ಅಮೆರಿಕದ ಓಹಿಯೊ ಸ್ವೇಟ್ ವಿಶ್ವವಿದ್ಯಾಲಯದಲ್ಲಿ ಪರಮಾಣು ಭೌತವಿಜ್ಞಾನ ವಿಷಯದಲ್ಲಿ ಪಿ.ಎಚ್ಡಿ ಮಾಡಿದರು.
1962ರಲ್ಲಿ ವಿಜ್ಞಾನದ ಮಹತ್ವ ಪರಿಚಯಿಸಲೆಂದು ಬೆಂಗಳೂರು ಸೈನ್ಸ್ ಫೋರಂ ಹುಟ್ಟು ಹಾಕಿ ಅದರ ಸಂಸ್ಥಾಪಕ ಅಧ್ಯಕ್ಷರಾದರು. ಅದೇ ವರ್ಷ ಸಂಗೀತ, ನಾಟಕ, ನೃತ್ಯ ಮುಂತಾದ ಲಲಿತಕಲೆಗಳನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಬೆಂಗಳೂರಿನ ಲಲಿತ ಕಲಾ ಪರಿಷತ್ ಸ್ಥಾಪಿಸಿ, ಅಧ್ಯಕ್ಷರಾಗಿದ್ದರು.
1967-68ರಲ್ಲಿ ಸದರನ್ ಇಲಿನಾಯ್ಸ್ ವಿಶ್ವವಿದ್ಯಾಲಯದಲ್ಲಿ ಒಂದು ವರ್ಷಕಾಲ ಸಂದರ್ಶಕ ಪ್ರಾಧ್ಯಾಪಕರಾಗಿದ್ದ ನರಸಿಂಹಯ್ಯ ಅವರು, 1972ರಿಂದ 1977 ರವರೆಗೆ ಬೆಂಗಳೂರು ವಿಶ್ವವಿದ್ಯಾಲಯದ ಉಪ ಕುಲಪತಿಯಾಗಿ ವಿಶ್ವವಿದ್ಯಾಲಯದ ಅಭಿವೃದ್ಧಿಗೆ ಅರ್ಹನಿಶ ಶ್ರಮಿಸಿದರು.
ಇದರ ನಡುವೆಯೇ 1975ರಿಂದ ನ್ಯಾಷನಲ್ ಎಜುಕೇಷನ್ ಸೊಸೈಟಿ ಆಫ್ ಕರ್ನಾಟಕದ ಅಧ್ಯಕ್ಷರಾಗಿ ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಒತ್ತು ನೀಡಿದರು. 1980ರಲ್ಲಿ ರಾಜ್ಯ ಸರಕಾರ ಇವರನ್ನು ವಿಧಾನ ಪರಿಷತ್ತಿಗೆ ನಾಮಕರಣ ಸದಸ್ಯರನ್ನಾಗಿ ಮಾಡಿತ್ತು. 1995ರಲ್ಲಿ ಕೆಲಕಾಲ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದರು.
ಧಣಿವರಿಯದ ಈ ಸಾಧಕನಿಗೆ ಹತ್ತು ಹಲವು ಪ್ರಶಸ್ತಿ ಗೌರವಗಳು ಅರಸಿ ಬಂದಿವೆ. ಈ ಪೈಕಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (1968), ಪದ್ಮಭೂಷಣ (1984) ಪ್ರಮುಖವಾದವುಗಳು.
ಹೋರಾಟದ ಬದುಕು & 85 ವರ್ಷಗಳ ಖಾದಿ ಜೀವನ
13 ವರ್ಷದವರಿದ್ದಾಗಲೇ ಖಾದಿ ತೊಡಲು ಪ್ರಾರಂಭಿಸಿದ ನರಸಿಂಹಯ್ಯನವರು, ತಮ್ಮ ಕೊನೆ ಉಸಿರಿರುವವರೆಗೂ ಖಾದಿಯ ಸರಳ ಉಡುಗೆಯಲ್ಲೇ ಸಂತನಂತೆ ಬದುಕಿದರು.
ಬೆಂಗಳೂರಿನ ನ್ಯಾಷನಲ್ ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದ ರಾಷ್ಟ್ರೀಯತೆ ವಿಚಾರ ಮೊಳೆಯುತ್ತದೆ. ಸರಳತೆ ಹಾಗೂ ದೃಢ ದೇಶ ಪ್ರೇಮದ ಗಾಂಧೀಜಿ ಅವರ ಬದುಕು ಇವರ ಮೇಲೆ ಆಳವಾದ ಪ್ರಭಾವ ಬೀರಿತ್ತು.
ಕಾಲೇಜು ದಿನಗಳಲ್ಲಿ ಗಾಂಧೀಜಿ ಅವರಿಂದ ಪ್ರೇರಿತರಾಗಿ 1942ರ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿದ್ದರ ಪರಿಣಾಮವಾಗಿ ಬೆಂಗಳೂರು, ಮೈಸೂರು ಮತ್ತು ಪುಣೆಯ ಯರವಾಡ ಜೈಲಿನಲ್ಲಿ ಒಟ್ಟು ಸುಮಾರು 9 ತಿಂಗಳ ಕಾರಾಗೃಹವಾಸ ಅನುಭವಿಸಿದ್ದರು. ಪರಿಣಾಮ, ಎರಡು ವರ್ಷಗಳ ವಿದ್ಯಾಭ್ಯಾಸ ನಿಲ್ಲಿಸಬೇಕಾಗಿ ಬಂದರೂ ದೃತಿಗೆಡದವರು ನಮ್ಮ ಎಚ್ಚೆನ್.
ಹೀಗೆ ಅವರ ಜೀವನ ಬಹುತೇಕರಿಗೆ ಆದರ್ಶಮಾರ್ಗ ದರ್ಶನ ಹಾಗೂ ಅವರ ಮಾತು “ಪ್ರಶ್ನಿಸದೆ ಏನನ್ನೂ ಒಪ್ಪಬೇಡ” ಎಂಬುವುದು ಹಾಗೂ ಇವರ ವೈಚಾರಿಕತೆ ಪ್ರಜ್ಞೆಯ ಜೊತೆ ಸಾಮಾನ್ಯ ಜೀವನ ನೆಡೆಸಿರುವುದು ಈಗಿನ ಯುವಕರಿಗೆ ಎಚ್ಚೆನ್ ಅವರ ಜೀವನ ಒಂದು ಅಮೋಘ ಆದರ್ಶ.
HN Room Photos by CkPhotography ಸಿಕೆಪಿ@ckphotographi

ಡಿ.ಜಿ ಪವನ್ ಕಲ್ಯಾಣ್
- ಓದಿದ್ದು ಇಂಗ್ಲೀಷ್ ಲಿಟರೇಚರ್. ಹವ್ಯಾಸ ಇತಿಹಾಸ ಮತ್ತು ಸಂಶೋಧನೆ. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಐತಿಹಾಸಿಕ ತಾಣಗಳ ಬಗ್ಗೆ ಅತೀವ ಆಸಕ್ತಿ. ದೇವಿಕುಂಟೆ ಕೋಟೆಯ ಕುರಿತು ಆಳವಾದ ಶೋಧ ಮಾಡುತ್ತಿದ್ದಾರೆ.



















H Narasimhayya ravara bagge thumba savi vistharavagi mathu saralavagi thilisi kottiddakke thumba danyavadagalu.